ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹೀನಾಯ ಸೋಲಿನ ಬಳಿಕ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಅವರು ಭಾನುವಾರ ರಾಷ್ಟ್ರ ರಾಜಧಾನಿ ದಿಲ್ಲಿಯತ್ತ ಮುಖಮಾಡಿದ್ದಾರೆ.
ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ನಾಳೆ ಇಂಡಿಯಾ ಒಕ್ಕೂಟದ ಮಹತ್ವದ ಸಭೆ ನಡೆಯಲಿದ್ದು, ಈ ಹಿನ್ನೆಲೆ ಮಮತಾ ಬ್ಯಾನರ್ಜಿ ತೆರಳಿದ್ದಾರೆ. ಹಿರಿಯ ನಾಯಕರಾದ ಡೋಲಾ ಸೇನ್ ಮತ್ತು ಕಲ್ಯಾಣ್ ಬ್ಯಾನರ್ಜಿ ಸಾಥ್ ನೀಡಿದ್ದಾರೆ.
ಟಿಎಂಸಿಯಲ್ಲಿ ಬಂಡಾಯ ಎದ್ದ ಸಂಸದರು
ಒಂದೆಡೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೆ, ಮತ್ತೊಂದೆಡೆ ಟಿಎಂಸಿಯ 20ಕ್ಕೂ ಹೆಚ್ಚು ಸಂಸದರು ಪಕ್ಷದ ವಿರುದ್ಧ ಬಂಡಾಯ ಸಾರಿದ್ದಾರೆ. ಇದರಿಂದ ಪಕ್ಷ ಇಬ್ಭಾಗವಾಗುವ ಭೀತಿ ಎದುರಾಗಿದ್ದು, ಈ ಎಲ್ಲದರ ನಡುವೆ ಮಮತಾ ಬ್ಯಾನರ್ಜಿ ದೆಹಲಿಗೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
23 ರಾಜಕೀಯ ಪಕ್ಷಗಳು ಭಾಗಿ
ಸಭೆಯಲ್ಲಿ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸೋಲಿನ ಕುರಿತು ಮೈತ್ರಿ ಪಕ್ಷಗಳು ಚರ್ಚೆ ನಡೆಸಲಿದ್ದು, ಒಟ್ಟು 23 ರಾಜಕೀಯ ಪಕ್ಷಗಳು ಭಾಗವಹಿಸಲಿದೆ ಖಚಿತಪಡಿಸಿವೆ ಎಂದು ಕಾಂಗ್ರೆಸ್ ತಿಳಿಸಿದೆ.
ಡಿಎಂಕೆ ಬಹಿಷ್ಕಾರ, ಆಮ್ ಆದ್ಮಿ ಪಾರ್ಟಿ ಔಟ್
ಇನ್ನೊಂದೆಡೆ, ಆಮ್ ಆದ್ಮಿ ಪಾರ್ಟಿ ಈಗಾಗಲೇ ಮೈತ್ರಿಯಿಂದ ಹೊರಬಿದ್ದಿದೆ. ಅತ್ತ ಮೈತ್ರಿಕೂಟದ ಡಿಎಂಕೆ ಪಕ್ಷವು ಈ ಸಭೆಯಿಂದ ದೂರ ಉಳಿಯಲು ನಿರ್ಧರಿಸಿರುವುದು ಒಕ್ಕೂಟಕ್ಕೆ ದೊಡ್ಡ ಹೊಡೆತ ನೀಡಿದೆ. ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ಅವರ ಹೊಸ ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿರುವುದಕ್ಕೆ ಸಿಎಂ ಎಂ.ಕೆ. ಸ್ಟಾಲಿನ್ ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕೆ ಸಭೆಯನ್ನು ಬಹಿಷ್ಕರಿಸಿದ್ದಾರೆ. ಇನ್ನು ಕೇರಳದಲ್ಲಿ ಸಿಪಿಐ(ಎಂ) ಕೂಡ ಸಭೆಗೆ ಕೇವಲ ತನ್ನ ಪ್ರತಿನಿಧಿಯಾಗಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ಮಾತ್ರ ಕಳುಹಿಸುತ್ತಿದೆ.



