ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಹೈಡ್ರಾಮಾ ತಾರಕಕ್ಕೇರಿದ್ದು, ಈಗಾಗಲೇ ಒಬ್ಬರ ಹಿಂದೆ ಒಬ್ಬರಂತೆ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಇದರ ನಡುವೆ ಒಂದು ವಾರದ ಹಿಂದಷ್ಟೇ ಪಕ್ಷದ ಯುವ ಮತ್ತು ಮಹಿಳಾ ವಿಭಾಗದ ಅಧ್ಯಕ್ಷರನ್ನಾಗಿ ನೇಮಕಗೊಂಡಿದ್ದ ಸಂಸದೆ ಸಾಯೋನಿ ಘೋಷ್, ಮಾಲಾ ರಾಯ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಅವರ ಜಾಗಕ್ಕೆ ಅರ್ನಬ್ ಬ್ಯಾನರ್ಜಿ ಮತ್ತು ಅಲಿಫಾ ಅಹ್ಮದ್ ಅವರನ್ನು ನೇಮಕ ಮಾಡಿದ್ದಾರೆ.
ಒಂದೆಡೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಇದರ ನಡುವೆ ಪಕ್ಷದಲ್ಲಿನ ಹಿಡಿತವನ್ನು ತಮ್ಮ ಆಪ್ತರಿಗೆ ನೀಡಲು ದೀದಿ ಮುಂದಾಗಿದ್ದಾರೆ.
ದೀದಿ ವಿರುದ್ಧ 20 ಸಂಸದರು
ಇತ್ತೀಚೆಗೆ ಮಮತಾ ಬ್ಯಾನರ್ಜಿಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಾಯೋನಿ ಘೋಷ್ ಮತ್ತು ಮಾಲಾ ರಾಯ್ ಇಬ್ಬರೂ ಬಂಡಾಯಗಾರರ ಗುಂಪು ಸೇರಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದರ ಜೊತೆಗೆ ಟಿಎಂಸಿಯ ಬರೋಬ್ಬರಿ 20 ಸಂಸದರು ದೀದಿ ವಿರುದ್ಧ ತಿರುಗಿಬಿದ್ದಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಬಿಜೆಪಿ ನೇತೃತ್ವದ ಎನ್ಡಿಎಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಹೊಸ ನಾಯಕತ್ವ ರಚನೆ
ಹೀಗಾಗಿ ಟಿಎಂಸಿಯ ಎಲ್ಲಾ ಹಿಂದಿನ ಸಮಿತಿಗಳು ಮತ್ತು ಸಂಘಟನೆಗಳನ್ನು ವಿಸರ್ಜಿಸಿ ಹೊಸ ನಾಯಕತ್ವ ರಚನೆ ಪಕ್ಷ ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಪಕ್ಷದ ಡೈಮಂಡ್ ಹಾರ್ಬರ್ ಸಂಸದ ಮತ್ತು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬಂಡಾಯ ಶಮನದ ಕಸರತ್ತು
ಜೊತೆಗೆ ಟಿಎಂಸಿಯ ಬೆಲೆಘಾಟ ಸಂಸದ ಕುನಾಲ್ ಘೋಷ್ ಅವರನ್ನು ಸುದೀಪ್ ಬಂಡೋಪಾಧ್ಯಾಯ ನಿರ್ವಹಿಸುತ್ತಿದ್ದ ಉತ್ತರ ಕೋಲ್ಕತ್ತಾ ಸಾಂಸ್ಥಿಕ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಿರಿಯ ಸಂಸದೆ ಸೌಗತ ರಾಯ್ ಅವರನ್ನು ಟಿಎಂಸಿಯ ಲೋಕಸಭಾ ವಿಭಾಗದ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಎಂಟು ಸಂಸದರು ಜೊತೆಯಲಿದ್ದು, ಈ ಮೂಲಕ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ದೀದಿ ಪ್ರಯತ್ನ ನಡೆಸುತ್ತಿದ್ದಾರೆ.



