ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾಲ್ವರು ಶಾಸಕರು ಅಡ್ಡ ಮತದಾನ ಮಾಡಿರುವುದು ಸಾಬೀತಾಗಿದೆ. ಈ ಕುರಿತು ಮೈಸೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. “ಅಡ್ಡ ಮತದಾನ ಮಾಡಿದ ಆ ನಾಲ್ವರು ಯಾರು ಮತ್ತು ಯಾವ ಕಾರಣಕ್ಕೆ ಈ ದ್ರೋಹ ಎಸಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅವರು ಈಗಾಗಲೇ ಪಕ್ಷ ಬಿಡುವ ಬಗ್ಗೆ ಚರ್ಚೆ ನಡೆಸಿದ್ದಾರೆ” ಎಂದು ಕುಮಾರಸ್ವಾಮಿ ನೇರವಾಗಿ ಹೇಳಿದ್ದಾರೆ.
ನನಗಿದು ಶಾಕ್ ನೀಡಿಲ್ಲ: ಹಿತಶತ್ರುಗಳ ಪತ್ತೆಗೆ ಇದೊಂದು ಪರೀಕ್ಷೆ!
“ಕೆಲವರು ಅಡ್ಡ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ನಮಗೆ ಮೊದಲೇ ಇತ್ತು. ಹಾಗಾಗಿ ಈ ಫಲಿತಾಂಶ ನನಗೇನು ಅಚ್ಚರಿ ಅಥವಾ ಆಘಾತ ತಂದಿಲ್ಲ. ನಮ್ಮಲ್ಲಿರುವ ಹಿತಶತ್ರುಗಳು ಯಾರು, ಯಾರಿಗೆ ಪಕ್ಷದ ಮೇಲೆ ಗೌರವ ಇದೆ ಎಂದು ತಿಳಿಯಲು ಹಾಗೂ ಶಾಸಕರ ನಿಷ್ಠೆಯನ್ನು ಪರೀಕ್ಷಿಸಲೆಂದೇ ನಾವು ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಝೆನ್ ಜಿ (Gen Z) ಯುವಕರಿಂದ ಹೊಸ ಜೆಡಿಎಸ್ ಕಡತ!
ಬಂಡಾಯಗಾರರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಅವರು, “ಹೋಗುವವರೆಲ್ಲಾ ಹೋಗಲಿ, ನನಗೆ ಸೊನ್ನೆಯಿಂದ ಪಕ್ಷ ಕಟ್ಟುವುದು ಚೆನ್ನಾಗಿ ಗೊತ್ತು. ಮುಂದಿನ ದಿನಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲಿದ್ದೇನೆ. ಝೆನ್ ಜಿ (Gen Z) ತಲೆಮಾರಿನ ಸಕ್ರಿಯ ಯುವಕರನ್ನು ಪಕ್ಷಕ್ಕೆ ತಂದು, ಜೆಡಿಎಸ್ಗೆ ಹೊಸ ಚೈತನ್ಯ ತುಂಬಲಿದ್ದೇನೆ” ಎಂದು ಘೋಷಿಸಿದರು. ನಮಗೆ ನಿಜವಾದ ಅಗ್ನಿಪರೀಕ್ಷೆ ಇರುವುದು 2028ರ ವಿಧಾನಸಭಾ ಚುನಾವಣೆಯಲ್ಲಾಗಿದ್ದು, ಅಲ್ಲಿಯವರೆಗೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



