ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹಣ ದುರುಪಯೋಗ ಹಾಗೂ ಕಳ್ಳತನದ ಆರೋಪಗಳ ಬೆನ್ನತ್ತಿರುವ ವಿಶೇಷ ತನಿಖಾ ತಂಡ (SIT), ತನ್ನ 15 ಪುಟಗಳ ಮೊದಲ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯು ದೇವಸ್ಥಾನದ ಇಡೀ ದೇಣಿಗೆ ವ್ಯವಸ್ಥೆಯಲ್ಲಿ ನಡೆದಿರುವ ಭೀಕರ ಹಣಕಾಸು ಅಕ್ರಮಗಳನ್ನು ಬಹಿರಂಗಪಡಿಸಿದೆ. ಪರಿಣಾಮವಾಗಿ, ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ತೀವ್ರ ಸಂಶಯದ ಸುಳಿಗೆ ಸಿಲುಕಿದ್ದಾರೆ.
ಕೋಟಿ ಭಕ್ತರಿದ್ದರೂ ಕಾಣಿಕೆ ಕುಸಿತ!
ಬ್ಯಾಂಕ್ ದಾಖಲೆಗಳ ಪ್ರಕಾರ, ಪ್ರತಿ ತಿಂಗಳು ಸರಾಸರಿ 25 ಲಕ್ಷ ಹಾಗೂ ಕುಂಭಮೇಳದ ಅವಧಿಯಲ್ಲಿ ಬರೋಬ್ಬರಿ 1 ಕೋಟಿ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಿದ್ದರೂ, ಬ್ಯಾಂಕಿಗೆ ಜಮೆಯಾದ ಕಾಣಿಕೆ ಹಣ ಮಾತ್ರ ತೀವ್ರವಾಗಿ ಕುಸಿದಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಭಕ್ತರು ನೋಟುಗಳಿಗಿಂತ ನಾಣ್ಯಗಳನ್ನೇ ಹೆಚ್ಚು ಹಾಕಿದ್ದಾರೆ” ಎಂಬ ಹಾರಿಕೆ ಉತ್ತರ ಸಿಕ್ಕಿದೆ.
ಚಿನ್ನ-ಬೆಳ್ಳಿ ಆಭರಣಗಳಿಗೆ ಇಲ್ಲ ದಾಖಲೆ
ಭಕ್ತರು ಮಂದಿರಕ್ಕೆ ಸಮರ್ಪಿಸಿದ ಧಾನ್ಯ, ಎಣ್ಣೆ, ತುಪ್ಪ ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳಿಗೆ ಟ್ರಸ್ಟ್ನಲ್ಲಿ ಯಾವುದೇ ಅಧಿಕೃತ ರಶೀದಿ ಅಥವಾ ಪುರಾವೆಗಳು ಪತ್ತೆಯಾಗಿಲ್ಲ.
ಅನಧಿಕೃತ ಉದ್ಯೋಗಿಗಳ ಕೈಯಲ್ಲಿ ಹಣಕಾಸು!
ಯಾವುದೇ ಲಿಖಿತ ಆದೇಶ ಅಥವಾ ಅಧಿಕೃತ ನೇಮಕಾತಿ ಪತ್ರಗಳಿಲ್ಲದ ದೇವಸ್ಥಾನದ ಹಲವು ಉದ್ಯೋಗಿಗಳು, ಮಂದಿರದ ಪ್ರಮುಖ ಹಣಕಾಸಿನ ಜವಾಬ್ದಾರಿಗಳನ್ನು ಮತ್ತು ವಹಿವಾಟುಗಳನ್ನು ನಿರ್ವಹಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದು ಇಡೀ ವ್ಯವಸ್ಥೆಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.



