ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡದಿ ಟೌನ್ಶಿಪ್ ವಿವಾದ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕೆಲ ಸಮಯದ ಹಿಂದಷ್ಟೇ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬಿಡದಿ ಬಳಿ ನೂರು ಎಕರೆ ಜಮೀನಿದೆ ಎಂದು ಆರೋಪಿಸಿದ್ದರು. ಇದು ಎಚ್ಡಿ ಕುಮಾರಸ್ವಾಮಿ ಫ್ಯಾಮಿಲಿ ಸಿಟ್ಟಿಗೆ ಕಾರಣವಾಗಿದೆ.
ನಮ್ಮ ತಾಯಿಯ ಹೆಸರಿನಲ್ಲಿ ನೂರು ಎಕರೆ ಜಮೀನಿದೆ ಎಂದು ಹೇಳ್ತಿದ್ದಾರೆ. ಕಾನೂನು ಸಮರಕ್ಕೆ ಸಜ್ಜಾಗಿದ್ದೀವಿ. ನಮ್ಮ ಬಳಿ ಅಷ್ಟೊಂದು ಜಾಗ ಇದೆ ಅನ್ನೋದನ್ನು ಪ್ರೂವ್ ಮಾಡಿ. ಆಗಲಿಲ್ಲ ಅಂದ್ರೆ ಸಾರ್ವಜನಿಕವಾಗಿ ಕ್ಷಮೆ ಕೇಳಿ. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
ಇನ್ನೊಂದು ಕಡೆ ಅನಿತಾ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಎಂ.ಬಿ. ಪಾಟೀಲ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಇತ್ತ ಎಚ್ಚೆತ್ತ ಎಂಬಿ ಪಾಟೀಲ್ ತಮ್ಮ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಹಿಂದೆ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿಯ ಹೆಸರಿನಲ್ಲಿ ಬಿಡದಿಯಲ್ಲಿ ಜಮೀನಿದೆ ಎಂದು ಹೇಳಿದ್ದರು. ಬಿಡದಿಯಲ್ಲಿ ಅನಿತಾ ಅವರು 100 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಒಂದು ವೇಳೆ ಅಲ್ಲಿ ಅಷ್ಟು ಜಮೀನು ಇಲ್ಲದಿದ್ದರೆ ಅವರು ಆಗಲೇ ಸ್ಪಷ್ಟೀಕರಣ ನೀಡಬೇಕಿತ್ತು. ನಮ್ಮ ಭೂಮಿ ಇಲ್ಲ ಎಂದು ಹೇಳಿದರೆ ಇಲ್ಲಿಗೆ ಮುಗಿಯಿತು. ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಎಂದು ಹೇಳಿದ್ದಾರೆ.



