ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮರೆಯಲಾಗದ ನಿರಾಸೆ ತಂದಿದೆ. ಎರಡು ಪಂದ್ಯಗಳ ಸರಣಿಯಲ್ಲಿ 0-2 ಅಂತರದಿಂದ ಸೋಲು ಕಂಡಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಪಡೆ, ನಿರ್ಣಾಯಕ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ಸೋತು ಐತಿಹಾಸಿಕ ಮುಖಭಂಗ ಅನುಭವಿಸಿತು. ಮೊದಲ ಪಂದ್ಯದಲ್ಲೂ ಭಾರತ 34 ರನ್ಗಳಿಂದ ಸೋತಿತ್ತು.
ಐರ್ಲೆಂಡ್ ಆಟಕ್ಕೆ ಶ್ರೇಯಸ್ ಮೆಚ್ಚುಗೆ
ಸರಣಿ ಸೋಲಿನ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಐರ್ಲೆಂಡ್ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು. ಈ ಸರಣಿ ನಮ್ಮ ಪಾಲಿಗೆ ನಿರೀಕ್ಷಿತ ರೀತಿಯಲ್ಲಿ ಸಾಗಲಿಲ್ಲ. ಆದರೆ ಎದುರಾಳಿ ತಂಡ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಆಟವಾಡಿತು. ಪಿಚ್ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವರ ಫೀಲ್ಡಿಂಗ್ ಹಾಗೂ ಯೋಜನೆಗಳು ಗೆಲುವಿಗೆ ಕಾರಣವಾದವು ಎಂದು ಹೇಳಿದರು.
ಎರಡನೇ ಪಂದ್ಯದಲ್ಲಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರೂ ಬ್ಯಾಟರ್ಗಳು ನಿರೀಕ್ಷಿತ ಆಟವಾಡಲಿಲ್ಲ ಎಂದು ಅಯ್ಯರ್ ಒಪ್ಪಿಕೊಂಡರು. ಪಿಚ್ಗೆ ಹೊಂದಿಕೊಳ್ಳುವುದು ಹಾಗೂ ಸಿಂಗಲ್ಸ್ಗಳನ್ನು ಡಬಲ್ಸ್ಗಳಾಗಿ ಪರಿವರ್ತಿಸುವಲ್ಲಿ ಭಾರತ ಹಿಂದೆ ಬಿದ್ದಿತ್ತು. ಅದೇ ಐರ್ಲೆಂಡ್ಗೆ ಮೇಲುಗೈ ತಂದುಕೊಟ್ಟಿತು ಎಂದರು.
ಇದನ್ನೂ ಓದಿ:
ಹೊಸ ಆಟಗಾರರಿಗೆ ಅಮೂಲ್ಯ ಅನುಭವ
ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಪ್ರಿನ್ಸ್ ಯಾದವ್ ಮತ್ತು ಸೂರ್ಯಂಶ್ ಶೇಡ್ಗೆ ಕುರಿತು ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಿನ್ಸ್ ಐಪಿಎಲ್ನ ಅನುಭವವನ್ನು ಇಲ್ಲಿ ಸಹ ತೋರಿಸಿದ್ದಾರೆ. ಸೂರ್ಯಂಶ್ಗೆ ಇದು ಮೊದಲ ಪಂದ್ಯವಾಗಿದ್ದು, ಈ ಅನುಭವ ಅವರ ಮುಂದಿನ ವೃತ್ತಿಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಂದಿನ ಸರಣಿಯತ್ತ ಚಿತ್ತ
ಸರಣಿ ಸೋಲಿನ ನಿರಾಸೆಯ ನಡುವೆಯೂ ಐರ್ಲೆಂಡ್ ನೀಡಿದ ಆತಿಥ್ಯಕ್ಕೆ ಧನ್ಯವಾದ ತಿಳಿಸಿದ ಅಯ್ಯರ್, ಈ ಪ್ರವಾಸದಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಈಗ ಮುಂದಿನ ಸವಾಲುಗಳತ್ತ ಗಮನ ಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



