ಹೊಸದಿಗಂತ ವರದಿ ಬೆಳಗಾವಿ:
ಭಾರತದ ದಾರ್ಶನಿಕ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳು ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಮಾರ್ಗದರ್ಶನ ನೀಡಲಿದ್ದು, 21ನೇ ಶತಮಾನವನ್ನು ‘ಭಾರತೀಯ ಶತಮಾನ’ವೆಂದು ಗುರುತಿಸಲಾಗುತ್ತದೆ ಎಂದು ಕೇಂದ್ರ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ನಗರದ ಗೋಗಟೆ ಕಾಲೇಜಿನಲ್ಲಿ ನಡೆದ ಗುರುದೇವ ರಾನಡೆ ಅಕಾಡೆಮಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ, ಗುರುದೇವ ರಾನಡೆ ಅವರ ಸಂಪೂರ್ಣ ಬರಹಗಳನ್ನೊಳಗೊಂಡ 28 ಸಂಪುಟಗಳ ಮಹಾಗ್ರಂಥಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗುರುದೇವ ರಾನಡೆ ಅವರ ಕೃತಿಗಳು ಕೇವಲ ಪುಸ್ತಕಗಳಲ್ಲ, ಸತ್ಯದರ್ಶನ ಮತ್ತು ಆತ್ಮಶೋಧನೆಯ ವಿಚಾರಧಾರೆಯನ್ನು ಪುನರುಜ್ಜೀವನಗೊಳಿಸುವ ಮಹತ್ವದ ಕೃತಿಗಳಾಗಿವೆ ಎಂದು ಅವರು ಹೇಳಿದರು. ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವೀಯ ಮೌಲ್ಯಗಳ ಅರಿವು ಅಗತ್ಯವಾಗಿದ್ದು, ರಾನಡೆ ಅವರ ವಿಚಾರಗಳು ಹೊಸ ತಲೆಮಾರಿಗೆ ದಾರಿದೀಪವಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖಂಡ ಅರವಿಂದ ದೇಶಪಾಂಡೆ, ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಚಿವ ಶೇಖಾವತ್ ಅವರನ್ನು ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು.



