ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಆಕ್ರೋಶಭರಿತ ನಡವಳಿಕೆ ಕರ್ನಾಟಕ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶಾಸಕರು, ಸಾರ್ವಜನಿಕವಾಗಿಯೇ ಮೀಸೆ ತಿರುವಿ, ತೊಡೆ ತಟ್ಟಿ ಕುಸ್ತಿಗೆ ಆಹ್ವಾನ ನೀಡಿದ್ದಾರೆ ಎನ್ನಲಾದ ವಿಡಿಯೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ನಿಂದ ಪೊಲೀಸ್ ದೂರು ದಾಖಲು
ಪ್ರದೀಪ್ ಈಶ್ವರ್ ಅವರ ಈ ಪ್ರಚೋದನಾಕಾರಿ ವರ್ತನೆ ಹಾಗೂ ಜಾತಿ ಆಧಾರಿತ ವೈಷಮ್ಯ ಬಿತ್ತುವ ಹೇಳಿಕೆಗಳ ವಿರುದ್ಧ ಜೆಡಿಎಸ್ ಕಾನೂನು ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಜಿಲ್ಲಾಧ್ಯಕ್ಷ ಬಿ.ಎನ್. ಮುನಿಯಪ್ಪ ನೇತೃತ್ವದ ನಿಯೋಗವು ಚಿಕ್ಕಬಳ್ಳಾಪುರ ಎಸ್ಪಿ ಕಚೇರಿಗೆ ಭೇಟಿ ನೀಡಿ ಶಾಸಕರ ವಿರುದ್ಧ ಅಧಿಕೃತ ದೂರು ಸಲ್ಲಿಸಿದೆ.
ಕಠಿಣ ಕ್ರಮಕ್ಕೆ ಹೆಚ್ಚಿದ ಒತ್ತಾಯ
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಜವಾಬ್ದಾರಿಯುತ ಶಾಸಕರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಅಸಭ್ಯ ಸನ್ನೆಗಳನ್ನು ಮಾಡುವುದು ಮತ್ತು ಸಮಾಜದಲ್ಲಿ ಪ್ರಚೋದನೆ ನೀಡುವುದು ಕಾನೂನು ಬಾಹಿರ ಎಂದು ಜೆಡಿಎಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಶಾಂತಿ ಕದಡುವ ಯತ್ನ ನಡೆಸಿರುವ ಪ್ರದೀಪ್ ಈಶ್ವರ್ ವಿರುದ್ಧ ಪೊಲೀಸರು ತಕ್ಷಣವೇ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.



