ಹೊಸದಿಗಂತ ವರದಿ ಅಂಕೋಲಾ:
ಖಾಸಗಿ ಬಸ್ ಪಲ್ಟಿಯಾಗಿ ಸುಮಾರು 20 ಪ್ರಾಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಅವರ್ಸಾ ಹಾರವಾಡ ನಡುವಿನ ಕವಲಗದ್ದೆ ಸೇತುವೆ ಬಳಿ ಗುರುವಾರ ಮುಂಜಾನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ತೀವ್ರ ಸ್ವರೂಪದ ಗಾಯಗಳಾಗಿಲ್ಲ.
ಬೆಂಗಳೂರಿನಿಂದ ಗೋವಾ ಕಡೆ ಸಾಗುತ್ತಿದ್ದ ಸೀಬರ್ಡ್ ಟೂರಿಸ್ಟ್ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಬಳಿಯ ಇಳಿಜಾರು ಪ್ರದೇಶದಲ್ಲಿ ಪಲ್ಟಿಯಾಗಿದ್ದು ಮರವೊಂದಕ್ಕೆ ಬಡಿದು ನಿಂತಿದ್ದು ಮರದ ಆಸರೆ ಇಲ್ಲದಿದ್ದರೆ ಇನ್ನಷ್ಟು ತಗ್ಗು ಪ್ರದೇಶಕ್ಕೆ ಉರುಳಿ ಬೀಳುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.



