ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡು ಚಿಕ್ಕಮಗಳೂರು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ನಾಲ್ಕು ತಾಲೂಕುಗಳ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.
ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿನ ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಿಸಿ ಆಯಾ ತಾಲೂಕು ಆಡಳಿತ ಆದೇಶಿಸಿವೆ. ನಿನ್ನೆಯೂ ಭಾರೀ ಮಳೆ ಸುರಿದಿದ್ದು, ಮಕ್ಕಳ ಸುರಕ್ಷತೆಗಾಗಿ ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಅವತಿ, ವಸ್ತಾರೆ, ಆಲ್ದೂರು ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆಯಾ ತಾಲೂಕು ಆಡಳಿತದಿಂದ ಇಂದು ಒಂದು ದಿನ ಮಾತ್ರ ರಜೆ ಘೋಷಣೆ ಮಾಡಿವೆ.
ಮಳೆಯ ಜೊತೆಗೆ ಗಾಳಿಯೂ ಅತಿವೇಗದಲ್ಲಿ ಬೀಸುತ್ತಿದ್ದು, ಅನಾಹುತ ಸಂಭವಿಸುವ ಭಯದಿಂದ ರಜೆ ಘೋಷಣೆ ಮಾಡಲಾಗಿದೆ. ಮಳೆ ಮುಂದುವರಿದರೆ ರಜೆ ಮುಂದುವರಿಯುವ ಸಾಧ್ಯತೆ ಇದೆ.



