ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಲಕ್ಷ್ಮಿಯ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಸಂಖ್ಯಾಶಾಸ್ತ್ರಜ್ಞ, ಜ್ಯೋತಿಷಿ ಹಾಗೂ ಕನ್ನಡ ಬಿಗ್ ಬಾಸ್ ಮಾಜಿ ಸ್ಪರ್ಧಿ ಆರ್ಯವರ್ಧನ್ ಅಲಿಯಾಸ್ ಆರ್ಯವರ್ಧನ್ ಗುರೂಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕರ್ನಾಟಕ ಗೋವು ರಕ್ಷಕರ ಸೇನೆಯ ಸಂಸ್ಥಾಪಕ-ಅಧ್ಯಕ್ಷ ಎಸ್.ಜಿ. ಸುಮನ್ ಕುಮಾರ್ ನೀಡಿದ ದೂರಿನ ಆಧಾರದ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣದ ಸಂದರ್ಶನದಲ್ಲಿ ಗುರೂಜಿ ಹಿಂದು ಹಾಗೂ ಮಹಿಳೆಯರಿಗೆ ಮನಸ್ಸಿಗೆ ನೋವುಂಟು ಮಾಡುವ ಹಾಗೂ ಅಶ್ಲೀಲ ಪದವನ್ನು ಬಳಸಿದ್ದಾರೆ ಎನ್ನಲಾಗಿದೆ.
ಮಹಾಲಕ್ಷ್ಮಿ ದೇವಿಯು ಗುದದ್ವಾರದಲ್ಲಿ ನೆಲೆಸಿದ್ದಾಳೆ, ಅದನ್ನು ಪೂಜಿಸಬೇಕು. ಗೋವುಗಳ ಹಿಂಬದಿಗೆ ತಾನೇ ಎಲ್ಲರೂ ಪೂಜೆ ಮಾಡೋದು ಎಂದು ಹೇಳಿದ್ದಾರೆ ಎನ್ನಲಾಗಿದೆ. ದೂರು ಸ್ವೀಕರಿಸಿದ ಪೊಲೀಸರು ದೂರುದಾರರ ಹೇಳಿಕೆ ದಾಖಲಿಸಿಕೊಂಡು, ಆರ್ಯವರ್ಧನ್ ನೀಡಿರುವುದಾಗಿ ಹೇಳಲಾದ ವಿಡಿಯೊವನ್ನು ಪರಿಶೀಲಿಸಿದ್ದಾರೆ.
ಬಳಿಕ ಸಂಬಂಧಪಟ್ಟ ಕಾನೂನು ತಜ್ಞರಿಂದ ಕಾನೂನು ಅಭಿಪ್ರಾಯ ಪಡೆದು, ದೂರು, ವಿಡಿಯೊ ಸಾಕ್ಷ್ಯ ಮತ್ತು ಕಾನೂನು ಅಭಿಪ್ರಾಯದ ಆಧಾರದ ಮೇಲೆ ಆರ್ಯವರ್ಧನ್ ಗುರೂಜಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಯನ್ನು ಶಂಕರಪುರ ಪೊಲೀಸರು ಮುಂದುವರಿಸಿದ್ದಾರೆ.



