July 11, 2026
Saturday, July 11, 2026
spot_img

ಗಂಭೀರ್ ಹಾದಿ ‘ತಾಳ್ಮೆ’, ಶ್ರೇಯಸ್ ಹಾದಿ ‘ಕಿಡಿ’: ಟೀಮ್ ಇಂಡಿಯಾದಲ್ಲಿ ಕೋಚ್-ನಾಯಕನ ಜಟಾಪಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ವಿದೇಶಿ ಮಣ್ಣಿನಲ್ಲಿ ಸತತ ಸೋಲುಗಳ ಸುಳಿಗೆ ಸಿಲುಕಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿನ ಕಳಪೆ ಪ್ರದರ್ಶನ, ಅದರಲ್ಲೂ ಇಂಗ್ಲೆಂಡ್ ವಿರುದ್ಧ ಕೇವಲ 76 ರನ್‌ಗಳಿಗೆ ಆಲೌಟ್ ಆಗಿರುವುದು ಕ್ರೀಡಾಲೋಕದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಗೌತಮ್ ಗಂಭೀರ್ ಸಮರ್ಥನೆ

ತಂಡದ ಈ ಪ್ರದರ್ಶನವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡಿದ್ದಾರೆ. “ನಮ್ಮದು ಕೆಟ್ಟ ತಂಡವಲ್ಲ, ಇದೊಂದು ಬದಲಾವಣೆಯ ಪ್ರಕ್ರಿಯೆ” ಎಂದು ಹೇಳಿರುವ ಅವರು, ಅಭಿಮಾನಿಗಳಲ್ಲಿ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ವಿಶ್ವಕಪ್ ವಿನ್ನರ್ಸ್ ಆದ ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಸದ್ಯ ತಂಡದಲ್ಲಿಲ್ಲ. ಭವಿಷ್ಯದ ದೃಷ್ಟಿಯಿಂದ 15 ವರ್ಷದ ವೈಭವ್ ಸೂರ್ಯವಂಶಿ ಹಾಗೂ ವೇಗಿ ಪ್ರಿನ್ಸ್ ಯಾದವ್ ಅವರಂತಹ ಯುವ ಪ್ರತಿಭೆಗಳಿಗೆ ಮಣೆ ಹಾಕಲಾಗುತ್ತಿದೆ. ಹೆಚ್ಚಿನ ರಿಸ್ಕ್ ಇರುವ ‘ಭಯವಿಲ್ಲದ ಆಟದ ಶೈಲಿ’ (Fearless Cricket) ಅಳವಡಿಸಿಕೊಂಡಿರುವುದರಿಂದ ಆರಂಭದಲ್ಲಿ ಇಂಥ ವೈಫಲ್ಯ ಸಹಜ ಎಂದು ಅವರು ಪಿಚ್ ಪರಿಸ್ಥಿತಿ ಅರಿಯುವಲ್ಲಿ ಆದ ಲೋಪಗಳನ್ನು ಒಪ್ಪಿಕೊಂಡಿದ್ದಾರೆ.

ನಾಯಕ ಶ್ರೇಯಸ್ ಅಯ್ಯರ್ ಅಸಮಾಧಾನ

ಆದರೆ, ಕೋಚ್ ಗಂಭೀರ್ ಅವರ ಶಾಂತ ಹೇಳಿಕೆಗೆ ತದ್ವಿರುದ್ಧವಾಗಿ ಟಿ20 ನಾಯಕ ಶ್ರೇಯಸ್ ಅಯ್ಯರ್ ಕಿಡಿಕಾರಿದ್ದಾರೆ. ತಂಡದ ಸತತ ಬ್ಯಾಟಿಂಗ್ ಕುಸಿತವನ್ನು “ಅತಿ ಘೋರ ಮತ್ತು ಒಪ್ಪಿಕೊಳ್ಳಲು ಅಸಾಧ್ಯ” ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಭಿನ್ನ ಹೇಳಿಕೆಗಳು ಈಗ ಕೋಚ್ ಮತ್ತು ಕ್ಯಾಪ್ಟನ್ ನಡುವೆ ಹೊಂದಾಣಿಕೆ ಇಲ್ಲವೇ ಎಂಬ ಹೊಸ ವಿವಾದಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !