ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯನ್ನು ಹಾಡುವ ಕ್ರಮದ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಇನ್ನು ಮುಂದೆ ಸರ್ಕಾರಿ ಸಮಾರಂಭಗಳಲ್ಲಿ ಮೊದಲು ‘ವಂದೇ ಮಾತರಂ’ ಹಾಡಿ ಅಥವಾ ನುಡಿಸಿ, ಬಳಿಕ ರಾಷ್ಟ್ರಗೀತೆಯಾದ ‘ಜನಗಣಮನ’ವನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಸೂಚಿಸಲಾಗಿದೆ.
ರಾಜ್ಯಗೀತೆಗೆ ಮೊದಲ ಆದ್ಯತೆ
ರಾಜ್ಯ ಸರ್ಕಾರಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ಆಯಾ ರಾಜ್ಯದ ಗೀತೆ, ನಂತರ ‘ವಂದೇ ಮಾತರಂ’ ಹಾಗೂ ಕೊನೆಯಲ್ಲಿ ‘ಜನಗಣಮನ’ ಹಾಡುವ ಅಥವಾ ನುಡಿಸುವ ಕ್ರಮವನ್ನು ಅನುಸರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಬಳಿಕ ಉಳಿದ ಎರಡು ಗೀತೆಗಳನ್ನು ಹಾಡಬೇಕು.
ಸರಿಯಾದ ಸಾಹಿತ್ಯ, ಉಚ್ಚಾರಣೆ ಕಡ್ಡಾಯ
ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವಾಗ ಮೂಲ ಸಾಹಿತ್ಯ ಹಾಗೂ ಸರಿಯಾದ ಉಚ್ಚಾರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ಇದಕ್ಕಾಗಿ ಅಧಿಕೃತ ಸಾಹಿತ್ಯ ಮತ್ತು ಮಾರ್ಗಸೂಚಿಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ:
ಯಾವ ಸಂದರ್ಭಗಳಲ್ಲಿ ಕಡ್ಡಾಯ?
ರಾಷ್ಟ್ರಪತಿ, ರಾಜ್ಯಪಾಲರ ಅಧಿಕೃತ ಸಮಾರಂಭಗಳು, ನಾಗರಿಕ ಪ್ರಶಸ್ತಿ ಪ್ರದಾನ, ರಾಷ್ಟ್ರೀಯ ಕಾರ್ಯಕ್ರಮಗಳು ಸೇರಿದಂತೆ ನಿಗದಿತ ಸಂದರ್ಭಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಗೀತೆಗಳು ಮೊಳಗುವ ವೇಳೆ ಎಲ್ಲರೂ ಗೌರವ ಸೂಚಕವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
ಈ ಹೊಸ ಮಾರ್ಗಸೂಚಿಯನ್ನು ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಸಂಬಂಧಿತ ಸರ್ಕಾರಿ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.



