ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶವಂತಪುರ ವಿಧಾನಸಭಾ ಕ್ಷೇತ್ರದ ಬ್ಯಾಡಹಳ್ಳಿ ಮತ್ತು ಭಾರತ ನಗರದಲ್ಲಿ ಐದು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಲೇ ಇದೆ, ಚಿರತೆ ಎಲ್ಲಿಂದ ಅಟ್ಯಾಕ್ ಮಾಡಬಹುದು ಎಂಬ ಭಯಕ್ಕೆ ಜನ ಹೊರಗಡೆ ಬರುವುದನ್ನೇ ನಿಲ್ಲಿಸಿದ್ದಾರೆ.
ಗುರುವಾರ ಮತ್ತು ಶುಕ್ರವಾರದಂದು ಒಂದು ಪಾರ್ಕ್ನಲ್ಲಿ ಮತ್ತು ರಸ್ತೆಗೆ ಅಡ್ಡಲಾಗಿರುವ ಖಾಲಿ ಸೈಟ್ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಾರ್ವಜನಿಕರ ಒತ್ತಾಯದ ಮೇರೆಗೆ ಪೊದೆಗಳನ್ನು ತೆರವುಗೊಳಿಸಿದ ನಂತರವೂ, ಚಿರತೆ ನಿನ್ನೆ ಮತ್ತೆ ಕಾಣಿಸಿಕೊಂಡಿದ್ದು, ಭಯ ಹೆಚ್ಚಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನನ್ನು ಇರಿಸಿದ್ದಾರೆ. ಆದರೆ ಒಂದೇ ಕಡೆ ಇಡುವ ಬದಲು ಮೂರ್ನಾಲ್ಕು ಕಡೆ ಇಟ್ಟು ಚಿರತೆಯನ್ನು ಹಿಡಿಯಿರಿ, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಹೆಚ್ಚುಮಾಡಿ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸಂಜೆ ಆಗುತ್ತಿದ್ದಂತೆ ಜನರು ಈ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದು, ವಾಹನ ಸಂಚಾರವೂ ಕಡಿಮೆಯಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಜನರು ಮನವಿ ಮಾಡಿದ್ದಾರೆ.



