ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಕಾಮರ್ಹಾಟಿ ಕ್ಷೇತ್ರದ ಪ್ರಭಾವಿ ಶಾಸಕ ಹಾಗೂ ಹಿರಿಯ ನಾಯಕ ಮದನ್ ಮಿತ್ರ ಅವರು ಅಧಿಕೃತವಾಗಿ ಪಕ್ಷ ತೊರೆದಿದ್ದು, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದಾರೆ. ಇತ್ತೀಚಿನ ಬಿಕ್ಕಟ್ಟಿನ ಸಮಯದಲ್ಲೂ ದೀದಿಗೆ ನಿಷ್ಠರಾಗಿದ್ದ ಮಿತ್ರ ಅವರ ಈ ನಿರ್ಧಾರ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ.
ಅಭಿಷೇಕ್ ಬ್ಯಾನರ್ಜಿ ವಿರುದ್ಧ ಮದನ್ ಮಿತ್ರ ಗಂಭೀರ ವಾಗ್ದಾಳಿ
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಏಕಪಕ್ಷೀಯ ಧೋರಣೆಯೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಮದನ್ ಮಿತ್ರ ಕಿಡಿಕಾರಿದ್ದಾರೆ. “ನಾನು ಅಭಿಷೇಕ್ಗೆ ಕೆಲಕಾಲ ಪಕ್ಷದ ಜವಾಬ್ದಾರಿಯಿಂದ ಹಿಂದೆ ಸರಿದು, ಮೊದಲು ಸಂಘಟನೆ ಬಲಪಡಿಸಲು ಸಲಹೆ ನೀಡಿದ್ದೆ. ಆದರೆ ಅವರು ಹಠ ಬಿಡಲಿಲ್ಲ. ಇಂದು ಪಕ್ಷ ಮುಳುಗುತ್ತಿದ್ದರೂ, ಎಲ್ಲರನ್ನೂ ಬಲಿ ಕೊಟ್ಟು ಕೇವಲ ಒಬ್ಬರನ್ನು ಉಳಿಸಲು ಹರಸಾಹಸ ಪಡಲಾಗುತ್ತಿದೆ” ಎಂದು ಮಿತ್ರ ಆಕ್ರೋಶ ಹೊರಹಾಕಿದ್ದಾರೆ.
ಇಡಿ (ED) ತನಿಖೆಯ ಬೆನ್ನಲ್ಲೇ ದಿಢೀರ್ ರಾಜಕೀಯ ಟ್ವಿಸ್ಟ್
ವಿಶೇಷವೆಂದರೆ, ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯವು (ED) ಮುನ್ಸಿಪಲ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮದನ್ ಮಿತ್ರ ಅವರ ಪತ್ನಿ ಮತ್ತು ಪುತ್ರರಿಗೆ ಸಮನ್ಸ್ ಜಾರಿ ಮಾಡಿತ್ತು. ಇದರ ಮರುದಿನವೇ ಮಿತ್ರ ಅವರು ರೆಬೆಲ್ ಬಣದ ಜೊತೆ ಕೈಜೋಡಿಸಿರುವುದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.



