ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದ್ದು, ಕನ್ನಡಿಗರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ. ಜುಲೈ 23 ರಿಂದ ನಂದಿನಿ ಬ್ರ್ಯಾಂಡ್ನ ಬೆಣ್ಣೆ ಮತ್ತು ತುಪ್ಪದ ದರಗಳು ಅಧಿಕವಾಗಿವೆ. ಈಗಾಗಲೇ ಏರುತ್ತಿರುವ ಬಂಗಾರ, ಬೆಳ್ಳಿ, ತರಕಾರಿ ಹಾಗೂ ಹಣ್ಣುಗಳ ಬೆಲೆಯಿಂದ ತತ್ತರಿಸಿದ್ದ ಸಾಧಾರಣ ಕುಟುಂಬಗಳಿಗೆ ಈ ದಿಢೀರ್ ಏರಿಕೆ ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಧಾನ್ಯ ಮತ್ತು ಮಸಾಲೆ ಪದಾರ್ಥಗಳ ತುಟ್ಟಿ
ಸಂಸಾರದ ದೈನಂದಿನ ಅಡುಗೆಗೆ ಬೇಕಾಗುವ ಅಕ್ಕಿ, ವಿವಿಧ ಬೇಳೆಕಾಳುಗಳು, ಸಾಂಬಾರ್ ಮಸಾಲೆಗಳು ಹಾಗೂ ಒಣಹಣ್ಣುಗಳ ಬೆಲೆಯೂ ಗಣನೀಯವಾಗಿ ಜಿಗಿದಿದೆ. ಸಾಂಬಾರ್ ಪದಾರ್ಥಗಳ ಪೈಕಿ ಏಲಕ್ಕಿ ದರ ಕೆಜಿಗೆ ₹4,000 ಗಡಿ ತಲುಪಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಇದರ ಜೊತೆಗೆ ಧನಿಯಾ, ಜೀರಿಗೆ ಮತ್ತು ಸಾಸಿವೆ ದರಗಳೂ ಕೂಡ ಏರಿಕೆ ಹಾದಿಯಲ್ಲಿವೆ.
ಮಳೆ ಅಭಾವ ಮತ್ತು ಇಳುವರಿ ಕುಸಿತ
ಒಣಹಣ್ಣುಗಳ ಮಾರುಕಟ್ಟೆಯಲ್ಲಿ ಬಾದಾಮಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲದೆ ತೊಗರಿ ಬೇಳೆ, ಉದ್ದಿನ ಬೇಳೆ, ಸಕ್ಕರೆ, ಬೆಲ್ಲ, ಕಡಲೆಕಾಯಿ, ಹುಣಸೆಹಣ್ಣು ಹಾಗೂ ಒಣಮೆಣಸಿನಕಾಯಿ ದರಗಳು ಹೆಚ್ಚಾಗಿವೆ. ಮಳೆಯ ಅಭಾವ ಮತ್ತು ಕೃಷಿ ಇಳುವರಿ ಕಡಿಮೆಯಾಗಿರುವುದೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.



