July 26, 2026
Sunday, July 26, 2026
spot_img

ಬರಿದಾದ ಕಾವೇರಿ ನದಿ: ಸ್ತಬ್ಧಗೊಂಡ ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯು ಕೃಷಿ ವಲಯದ ಬೆನ್ನಲ್ಲೇ ಜಲವಿದ್ಯುತ್ ಉತ್ಪಾದನೆಗೂ ಭಾರಿ ಹೊಡೆತ ನೀಡಿದೆ. ಮಳೆಯಿಲ್ಲದೆ ಕಾವೇರಿ ನದಿ ಸಂಪೂರ್ಣ ಬರಿದಾಗುತ್ತಿರುವ ಹಿನ್ನೆಲೆಯಲ್ಲಿ, ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಎಂಬ ಹೆಗ್ಗಳಿಕೆಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಒಂದೂವರೆ ತಿಂಗಳಿಂದ ನಿಂತುಹೋದ ಉತ್ಪಾದನೆ

ಕಾವೇರಿ ನದಿಯಲ್ಲಿ ಸಮರ್ಪಕ ಪ್ರಮಾಣದ ನೀರಿನ ಹರಿವು ಇಲ್ಲದ ಕಾರಣ ಕಳೆದ ಸುಮಾರು ಒಂದೂವರೆ ತಿಂಗಳಿಂದ ಜಲವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಹಲವು ವರ್ಷಗಳ ಸುದೀರ್ಘ ಇತಿಹಾಸದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ವಿದ್ಯುತ್‌ ಉತ್ಪಾದನೆಯು ಸಂಪೂರ್ಣವಾಗಿ ನಿಂತುಹೋಗಿರುವುದು ತೀವ್ರ ಆತಂಕ ಮೂಡಿಸಿದೆ.

ಇದನ್ನೂ ಓದಿ:

ಬರಡಾದ ನದಿ; ಕೈಕೊಟ್ಟ 42 ಮೆಗಾವ್ಯಾಟ್ ವಿದ್ಯುತ್

ಶಿವನಸಮುದ್ರ ಸ್ಥಾವರದಲ್ಲಿ ನಿತ್ಯ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಈ ನಿರಂತರ ಪ್ರಕ್ರಿಯೆಗಾಗಿ ಪ್ರತಿದಿನ ಕನಿಷ್ಠ 1,450 ಕ್ಯೂಸೆಕ್ ನೀರಿನ ಅಗತ್ಯವಿರುತ್ತದೆ. ಕೆಆರ್‌ಎಸ್ (KRS) ಅಥವಾ ಕಬಿನಿ ಜಲಾಶಯದಿಂದ ನದಿಗೆ ನೀರು ಹರಿಸಿದರೆ ಮಾತ್ರ ಇಲ್ಲಿ ವಿದ್ಯುತ್‌ ಉತ್ಪಾದನೆ ಸಾಧ್ಯವಾಗುತ್ತದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಜಲಾಶಯಗಳಿಂದ ನೀರು ಬಾರದೆ ಕಾವೇರಿ ನದಿ ಒಣಗಿದೆ. ಪರಿಣಾಮವಾಗಿ ಜಲವಿದ್ಯುತ್ ಘಟಕದ ಚಕ್ರಗಳು ಸಂಪೂರ್ಣವಾಗಿ ಚಲನೆ ಕಳೆದುಕೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !