ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ರಾಜಧಾನಿ ಪಾಟ್ನಾ ಸಮೀಪದ ಭಕ್ತಿಯಾಪುರದಲ್ಲಿ ಹಾಡುಹಗಲೇ ಭಾರೀ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದ ಮುಂಭಾಗದಲ್ಲೇ ಹಾಗೂ ಭಕ್ತಿಯಾರ್ಪುರ ಪೊಲೀಸ್ ಠಾಣೆಯಿಂದ ಕೇವಲ 50 ಮೀಟರ್ ಅಂತರದಲ್ಲಿ ಈ ಕೃತ್ಯ ನಡೆದಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾನಾಪೂರ, ದೇದಾರ್ ಗ್ರಾಮದ ನಿವಾಸಿಗಳಾದ ವಿಶಾಲ್ ಕುಮಾರ್ ಹಾಗೂ ಅಭಿಷೇಕ್ ಕುಮಾರ್ ಎಂಬ ಯುವಕರು ಗಂಗಾ ಘಾಟ್ನಲ್ಲಿ ಆರತಿ ಮುಗಿಸಿಕೊಂಡು ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ನಿತೀಶ್ ಕುಮಾರ್ ಅವರ ನಿವಾಸದ ಬಳಿ ಮೊಂಚಾಗಿಯೇ ಸಂಚು ಹೂಡಿ ಕಾಯುತ್ತಿದ್ದ ಅಪರಿಚಿತ ದುಷ್ಕರ್ಮಿಗಳು, ಯುವಕರು ಹತ್ತಿರ ಬರುತ್ತಿದ್ದಂತೆ ದಿಢೀರ್ ಗುಂಡಿನ ಮಳೆ ಕರೆದಿದ್ದಾರೆ. ಈ ಭೀಕರ ದಾಳಿಯಲ್ಲಿ ವಿಶಾಲ್ ಅವರ ಬೆನ್ನಿಗೆ ಹಾಗೂ ಅಭಿಷೇಕ್ ಅವರ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ರಕ್ತಸ್ರಾವವಾಗುತ್ತಿದ್ದರೂ ಧೈರ್ಯ ಗೆಡದ ಯುವಕರು, ಬೈಕ್ ಬಿಟ್ಟು ತಾವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯಲ್ಲಿದ್ದ ಅವರಿಬ್ಬರನ್ನು ತಕ್ಷಣವೇ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಮಾಜಿ ಸಿಎಂ ಮನೆ ಮುಂದೆಯೇ ಘಟನೆ ನಡೆದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.



