ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. 1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ನೆನಪಿನಲ್ಲಿ ನಿರ್ಮಿಸಲಾಗಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ (ವಿವೇಕ ಸ್ಮಾರಕ) ವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಭದ್ರತೆ ನೀಡಲಾಗಿದೆ. ಪ್ರಧಾನಿ ಮೋದಿ ಜತೆ ಇದೇ ಮೊದಲ ಬಾರಿಗೆ ಸಿಎಂ ಆದ ನಂತರ ಡಿ.ಕೆ. ಶಿವಕುಮಾರ್ ಕೂಡ ಭೇಟಿ ನೀಡಲಿದ್ದಾರೆ. ನಾಡದೇವತೆ ಶ್ರೀ ಚಾಮುಂಡೇಶ್ವರಿಯ ದರುಶನ ಪಡೆದು, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ.
ಗಣ್ಯರ ಆಗಮನದ ಹಿನ್ನೆಲೆ ಕೆ.ಆರ್.ಬಿ ರಸ್ತೆ (ಡಿಸಿ ಆಫೀಸ್ನಿಂದ ಏಕಲವ್ಯ ಸರ್ಕಲ್), ಬೋಗಾದಿ ರಸ್ತೆ (ಮುಡಾ ಜಂಕ್ಷನ್ನಿಂದ ಡಾ.ಪದ್ಮ ವೃತ್ತ), ಪಡುವಾರಹಳ್ಳಿ ಜಂಕ್ಷನ್ನಿಂದ ಮೆಟ್ರೋಪೋಲ್ ಸರ್ಕಲ್, ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಹಾಗೂ ದಿವಾನ್ಸ್ ರಸ್ತೆಗಳಲ್ಲಿ ಓಡಾಟ ಮಾಡುವಂತಿಲ್ಲ.
ಪರ್ಯಾಯ ಮಾರ್ಗಗಳು: ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವವರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಹಾಗೂ ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕು. ಅಗ್ರಹಾರ, ಜೆ.ಪಿ.ನಗರ ಕಡೆಯಿಂದ ಬಸ್ ನಿಲ್ದಾಣಕ್ಕೆ ತೆರಳುವವರು ಸಿದ್ದಪ್ಪ ಸ್ಕ್ವೇರ್, ಎಂ.ಜಿ.ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್.ರಸ್ತೆ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.



