ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಹೊಟ್ಟೆ ಮೇಲೆ ಹೊಡೆದು ಬಿಡದಿ ಟೌನ್ಶಿಪ್ ಮಾಡಬೇಡಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.
ಸರ್ಕಾರ ಯಾವುದೇ ಆಗಿರಲಿ, ಸಿಎಂ ಯಾರೇ ಆಗಿರಲಿ ಬಿಡದಿಯ ರೈತರ ಕಿಂಚಿತ್ತು ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳೋದಕ್ಕೆ ಬಿಡೋದಿಲ್ಲ. ಮುಖ್ಯಮಂತ್ರಿಗಳು ಯಾರೇ ಆಗಿರಲಿ, ಉತ್ತಮ ಕೆಲಸ ಮಾಡಿದರೆ ಪಕ್ಷ ನೋಡದೇ ಬೆಂಬಲಿಸುತ್ತೇವೆ. ಆದರೆ ನಮ್ಮ ದೇಶದ ಬೆನ್ನೆಲುಬಾದ ರೈತನ ಹೊಟ್ಟೆ ಮೇಲೆ ಹೊಡೆಯುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.
ದುಡ್ಡು ಹೆಚ್ಚು ಮಾಡಿ ಆಮಿಷ ಒಡ್ಡಿದ್ದೀರಿ:
ಬಿಡದಿಯ ಜೆಡಿಎಸ್ ವೃತ್ತದಿಂದ ಆರಂಭವಾದ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗಿಯಾಗಿ, ಬಿಡದಿ ಭಾಗದಲ್ಲಿ ಯೋಜಿಸಲಾಗಿರುವ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಅಸಮಧಾನವಿದೆ. ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ಹೇಳುತ್ತಲೇ ಕೋಟಿ ಕೋಟಿ ಹಣಕ್ಕೆ ರೈತರಿಗೆ ಆಮಿಷ ಒಡ್ಡುತ್ತಿದ್ದೀರಿ. ಇದು ಸರಿಯಲ್ಲ ಎಂದಿದ್ದಾರೆ.
ಶಿವಕುಮಾರ್ರಲ್ಲಿ ನಮ್ಮ ಮನವಿ
9,600 ಎಕರೆ ಭೂಮಿಯನ್ನು ಆಕ್ರಮಣ ಮಾಡಲು ಹೊರಟಿದ್ದು, ಬಡ ರೈತರ ಹೊಟ್ಟೆ ಮೇಲೆ ಹೊಡೆಯುವ ಈ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಡಿಕೆ ಶಿವಕುಮಾರ್ ಅವರಿಗೆ ಕೈಮುಗಿದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಸಾಕಷ್ಟು ಖಾಲಿ ಸೈಟ್ ಮನೆಗಳಿವೆ
ಬೆಂಗಳೂರಿನಲ್ಲಿ ಈಗಾಗಲೇ ಸಹಸ್ರಾರು ಸೈಟ್ಗಳು ಮತ್ತು ನಿರ್ಮಿಸಲಾದ ಮನೆಗಳು ಖಾಲಿ ಬಿದ್ದಿವೆ. ಅವುಗಳನ್ನು ಕೊಳ್ಳುವವರೇ ಇಲ್ಲದಿರುವಾಗ, ರೈತರ ಸಣ್ಣ ಜಮೀನುಗಳನ್ನು ಕಸಿದುಕೊಂಡು ಯಾರ ಓಲೈಕೆಗಾಗಿ ಟೌನ್ಶಿಪ್ ಮಾಡಲು ಹೊರಟಿದ್ದೀರಿ? ಪ್ರಶ್ನಿಸಿದರು. ಇದೇ ವೇಳೆ ಸಿಎಂ ಅವರು ಸಮಿತಿ ರಚಿಸುವ ಮುನ್ನ ಬೆಂಗಳೂರಿನ ಖಾಲಿ ಸೈಟ್ಗಳ ಅಂಕಿಅಂಶಗಳನ್ನು ಪರಿಶೀಲಿಸಲಿ ಎಂದು ನಿಖಿಲ್ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.



