ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿಕ್ಕಬಾಣಾವಾರದಲ್ಲಿ ತಂದೆ ಹಾಗೂ ಮಗನ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ಪತ್ನಿ ಹರಿಣಿ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಗಂಡ ಹಾಗೂ ಮಗನನ್ನು ನಾನೇ ಕೊಲೆ ಮಾಡಿದೆ ಎಂದು ಹೇಳಿದ್ದಾಳೆ.
ಹರಿಣಿಗೆ ಅನೈತಿಕ ಸಂಬಂಧವಿತ್ತು. ತನ್ನ ಪ್ರಿಯಕರ ವಿನಯ್ ಜೊತೆಗೆ ಜೀವನ ಮಾಡುವ ಆಸೆಯಿಂದ ಪತಿ ಅಭಿನಂದನ್ ಹಾಗೂ ಮಗ ಯದುವೀರ್ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ರಾತ್ರಿ ಹನ್ನೊಂದು ಗಂಟೆಗೆ ತಂದೆ ಹಾಗೂ ಮಗ ರೂಮಿನಲ್ಲಿ ಮಲಗಿದ್ದ ವೇಳೆ ಪ್ರಿಯಕರ ವಿನಯ್ನ್ನು ಕರೆಸಿಕೊಂಡಿದ್ದಾಳೆ.
ದೊಡ್ಡ ಸೌಟಿನಿಂದ ಸಾಯುವವರೆಗೂ ಹಲ್ಲೆ
ಮನೆಗೆ ಬಂದ ವಿನಯ್ ಜೊತೆ ಸೇರಿ ಪತಿ ಮೇಲೆ ದೊಡ್ಡ ಸೌಟಿನಿಂದ ಹಲ್ಲೆ ಮಾಡಿ ತಲೆಗೆ ಹೊಡೆದಿದ್ದಾಳೆ. ಅಲ್ಲಿಯೇ ಕುಸಿದು ಬಿದ್ದ ಅಭಿನಂದನ್ ಮೇಲೆ ಮತ್ತೆ ಹಲ್ಲೆ ಮಾಡಿದ್ದಾಳೆ. ಅಭಿನಂದನ್ ಪ್ರಾಣ ಹೋಗುವವರೆಗೂ ಹೊಡೆದಿದ್ದಾಳೆ. ಈ ದೃಶ್ಯವನ್ನು ನೋಡಿದ ಮಗನನ್ನು ಏನು ಮಾಡುವುದು ಗೊತ್ತಾಗದೇ, ಮುಂದೆ ತಮಗೆ ಮುಳ್ಳಾಗಬಹುದು ಎಂದು ಭಾವಿಸಿ ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಎಲ್ಲ ಸಾಕ್ಷಿ ನಾಶ
ತಂದೆಯೇ ಮಗುವನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವಂತೆ ಬಿಂಬಿಸಲು ಪ್ರಯತ್ನಿಸಿದ್ದಾಳೆ. ಮನೆಯ ತುಂಬಾ ಬಿದ್ದಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಮೃತದೇಹದ ಬಟ್ಟೆಯನ್ನೂ ಬದಲಾಯಿಸಿದ್ದಾಳೆ. ರಕ್ತದ ಕಲೆಯಿರುವ ಬಟ್ಟೆಗಳನ್ನು ಒಗೆದು ಇಟ್ಟಿದ್ದಾಳೆ. ಇಬ್ಬರೂ ಸತ್ತ ನಂತರ ಅನುಮಾನ ಬಾರದಂತೆ ವಿನಯ್ ಎಸ್ಕೇಪ್ ಆಗಿದ್ದಾನೆ. ಸದ್ಯ ಹರಿಣಿಯನ್ನು ಬಂಧಿಸಿದ ಪೊಲೀಸರು ವಿನಯ್ಗಾಗಿ ಹುಡುಕಾಟ ಮುಂದುವರಿಸಿದ್ದಾರೆ.



