August 22, 2026
Saturday, August 22, 2026
spot_img

ಅನ್ನಂ ಬ್ರಹ್ಮ ಮಾಲಿಕೆ | ಇನ್ನೊಬ್ಬರ ಎಂಜಲು, ಇನ್ನೊಬ್ಬರ ಬಾಳೆಎಲೆಯಿಂದ ತೆಗೆದು ಏಕೆ ತಿನ್ನಬಾರದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಊಟವು ಯಜ್ಞ ಸ್ವರೂಪವಾಗಿದ್ದು, ಊಟವನ್ನು ಮಾಡುವಾಗ ಒಮ್ಮೆ ಬಾಳೆಎಲೆಗೆ ಬಡಿಸಿದ ನಂತರ ಅದು ಅಗ್ನಿಯ ಸಂಪರ್ಕಕ್ಕೆ ಬಂದಂತಾಗುತ್ತದೆ. ಜಠರಾಗ್ನಿಯು ಅವರವರ ಕರ್ಮಕ್ಕೆ ಅನುಗುಣವಾಗಿ ಭಿನ್ನವಾಗಿದ್ದು, ಒಬ್ಬರು ಇನ್ನೊಬ್ಬರ ಎಂಜಲನ್ನು ಅಥವಾ ಇನ್ನೊಬ್ಬರ ಬಾಳೆಎಲೆಯಿಂದ ತೆಗೆದುಕೊಂಡು ತಿನ್ನುವುದು ವ್ಯತಿರಿಕ್ತಪರಿಣಾಮವನ್ನು ಉಂಟುಮಾಡುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ’ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಶನಿವಾರ ಅವರು ‘ಅಗ್ನಿಜಯ’ದ ಕುರಿತಾಗಿ ಪ್ರವಚನ ಅನುಗ್ರಹಿಸಿದರು.

ಒಬ್ಬರ ಎಂಜಲನ್ನು ಇನ್ನೊಬ್ಬರು ತಿನ್ನಬಾರದು ಎಂಬ ನಿಯಮವಿದ್ದು, ಇದು ಆರೋಗ್ಯ ಹಾಗೂ ಆಧ್ಯಾತ್ಮದ ದೃಷ್ಟಿಯಿಂದ ಅನುಸರಣೀಯವಾಗಿದೆ ಎಂದ ಶ್ರೀಗಳು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ದಂಪತಿಗೆ ಈ ನಿಯಮದಿಂದ ವಿನಾಯಿತಿ ಇದ್ದು, ಸತಿಪತಿಗಳು ಅರ್ಧನಾರೀಶ್ವರ ತತ್ತ್ವದ ಪ್ರತೀಕ. ದಂಪತಿಗಳು ಎನ್ನುವಾಗ ಅದ್ವೈತವಿರುವುದರಿಂದ ಎಂಜಲನ್ನು ತಿನ್ನಬಾರದು ಎಂಬ ನಿಯಮಕ್ಕೆ ವಿನಾಯಿತಿ ಇದ. ಅಡುಗೆ ಮಾಡುವಾಗ ಒರಳು ಗುಂಡು ಹಾಗೂ ಸೌಟನ್ನು ಎಡದಿಂದ ಬಲಕ್ಕೆ ತಿರುಗಿಸಬೇಕು. ಇದು ಆಹಾರವನ್ನು ಸ್ವೀಕರಿಸುವವರ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಅಪ್ರದಕ್ಷಿಣಾಕಾರವಾಗಿ ಸೌಟನ್ನು ತಿರುಗಿಸಿ ಅಡುಗೆ ಮಾಡುವುದರಿಂದ ರಾಕ್ಷಸರಿಗೆ ಸಲ್ಲಿಕೆಯಾದಂತಾಗುತ್ತದೆ ಎಂದು ಆಪಸ್ತಂಬರ ಗೃಹ್ಯಸೂತ್ರದಲ್ಲಿ ಹೇಳಿದೆ ಎಂದು ಅವರು ವಿವರಿಸಿದರು.

ಹನುಮಂತನ ಬಾಲಕ್ಕೆ ಲಂಕೆಯಲ್ಲಿ ಬೆಂಕಿ ಹಚ್ಚಿದ ರಾಮಾಯಣದ ಸಂದರ್ಭವನ್ನು ವಿವರಿಸಿದ ಶ್ರೀಗಳು, ಇದನ್ನು ಅರಿತ ಸೀತೆಯು ತಾನು ಪತಿವ್ರತೆಯಾಗಿದ್ದರೆ ಹನುಮಂತನ ಬಾಲಕ್ಕೆ ಹಚ್ಚಿರುವ ಬೆಂಕಿಯು ತಂಪಾಗಲಿ ಎಂದು ಹೇಳುತ್ತಾಳೆ. ಆಂಜನೇಯನು ಬೆಂಕಿ ತನ್ನನ್ನು ಸುಡುತ್ತದೆ, ತಾನು ಅದನ್ನು ಸಹಿಸಬೇಕು ಎಂದು ಮಾನಸಿಕವಾಗಿ ಸಿದ್ಧನಾಗಿರುತ್ತಾನೆ. ಆದರೆ ಅಗ್ನಿಯು ಬಿಸಿಯಾಗಿ ಸುಡುವ ಬದಲು ತಂಪಾಗುತ್ತದೆ. ಗಾಳಿಯೂ ಕೂಡ ಹಿಮದ ಗಾಳಿಯಂತೆ ತಂಪಾಗಿ ಬೀಸುತ್ತದೆ. ಹನುಮಂತನ ಪಾಲಿಗೆ ಮಾತ್ರ ತಂಪಾದ ಅಗ್ನಿಯು, ಸ್ವರ್ಣಲಂಕೆಯನ್ನು ಸುಡುತ್ತದೆ. ಆದರೆ ಲಂಕೆಯನ್ನು ಸುಟ್ಟ ಅಗ್ನಿಯು ಸೀತೆಗೆ ತೊಂದರೆ ಮಾಡುವುದಿಲ್ಲ. ಇಂತಹ ವಿಸ್ಮಯ ನಡೆಯಲು ಸೀತೆಯ ಅಗ್ನಿಜಯವೇ ಕಾರಣವಾಗಿದ್ದು, ಅವಳು ಅನುಸರಿಸುತ್ತಿದ್ದ ಆಹಾರ ಕ್ರಮದಿಂದ ಇದು ಸಾಧ್ಯವಾಯಿತು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಸೀತೆಯು ಅಗ್ನಿಪ್ರವೇಶಮಾಡುವಾಗ ರಾಮನು ಏಕೆ ತಡೆಯಲಿಲ್ಲ? ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಆದರೆ ರಾಮನಿಗೆ ಸೀತೆ ಸಾಧಿಸಿಕೊಂಡಿರುವ ಅಗ್ನಿಜಯದ ಅರಿವಿತ್ತು. ಹಾಗಾಗಿ ರಾಮ ಆ ಬಗ್ಗೆ ಚಿಂತಿಸಲಿಲ್ಲ. ಇದು ಸೀತೆಯ ಚಾರಿತ್ರ ಶುದ್ಧಿಯ ಜೊತೆಗೆ ಪಂಚಭೂತಗಳ ನಿಯಂತ್ರಣವನ್ನೂ ಸೂಚಿಸುತ್ತದೆ ಎಂದು ವಿವರಿಸಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀಗಳ ಆಶೀರ್ವಾದ ಪಡೆದರು. ಹಿರಿಯ ವಕೀಲರಾದ ರಾಜಶೇಖರ ಹಿಲ್ಯಾರ್ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಜಿ.ಕೆ ಹೆಗಡೆ ಗೋಳಗೋಡು ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

ಗುನಗ ಸಮಾಜದಿಂದ ಸ್ವರ್ಣಪಾದುಕಾ ಸೇವೆ

ಶ್ರೀಮಠದ ಪಾರಂಪರಿಕವಾಗಿ ನಡೆದುಕೊಳ್ಖುವ ಕುಮಟಾ, ಹೊನ್ನಾವರ, ಅಂಕೋಲಾ ಭಾಗದ ಗುನಗ ಸಮಾಜದ ಗುರುಬಂಧುಗಳಿಂದ ಸ್ವರ್ಣಪಾದುಕಾ ಸೇವೆ ನಡೆಯಿತು. ರಾಜೇಶ ಗುನಗ, ಉದಯ ಗಣಪತಿ ಗುನಗ, ರಾಜು ಗಣಪತಿ ಗುನಗ, ನಾಗರಾಜ ರಮಾಕಾಂತ ಗುನಗ ಸೇರಿದಂತೆ ಗುರುಬಂಧುಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !