ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿರುವ ಭೋಟೆ ಕೋಶಿ ಹಾಗೂ ತ್ರಿಶೋಲಿ ನದಿಗಳು ಉಗ್ರರೂಪತಾಳಿದ್ದು, ಜಲಪ್ರಳಯಕ್ಕೆ ಇಡೀ ರಾಜ್ಯವೇ ತತ್ತರಿಸಿದೆ.

ಇದ್ದಕ್ಕಿದ್ದಂತೆಯೇ ನದಿಗಳ ನೀರಿನ ಮಟ್ಟದಲ್ಲಿ 30 ಅಡಿಗಳಷ್ಟು ಏರಿಕೆಯಾಗಿದ್ದು, ಇಡೀ ಪ್ರದೇಶ ಹೇಳ ಹೆಸರಿಲ್ಲದಂತಾಗಿದೆ. ಇದೇ ವೇಳೆ ಕೈಲಾಸ ಮಾನಸಸರೋವರ ಯಾತ್ರೆಗೆಂದು ಬಂದಿದ್ದ ಯಾತ್ರಿಕರು ನಾಪತ್ತೆಯಾಗಿದ್ದಾರೆ. ಲ್ಹೆಂಡೆ ಖೋಲಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಅಣೆಕಟ್ಟು ನೀರಿನ ಒತ್ತಡ ತಾಳಲಾರದೇ ಒಡೆದು ಹೋಗಿದೆ. ಇದರಿಂದಾಗಿ ಲಕ್ಷಾಂತರ ಲೀಟರ್ ನೀರು ಹಾಗೂ ಕೆಸರು ನುಗ್ಗಿ ಜಲಪ್ರಳಯ ಸೃಷ್ಟಿಯಾಗಿದೆ.

ನೀರು ನುಗ್ಗುವ ರಭಸಕ್ಕೆ ನದಿ ಪಾತ್ರದ ಜನವಸತಿ, ಜಲವಿದ್ಯುತ್ ಘಟಕಗಳು ಹಾಗೂ ಯಾತ್ರಾ ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ. ಈ ಭೀಕರ ಜಲಪ್ರಳಯದಲ್ಲಿ ಈಗಾಗಲೇ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಜಲಪ್ರಳಯದ ಸ್ಥಳದಿಂದ ಬರೋಬ್ಬರಿ 150 ಕಿಮೀ ದೂರದಲ್ಲಿ 33 ಮೃತದೇಹಗಳು ಪತ್ತೆಯಾಗಿವೆ.

ಸದ್ಯ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯು ಬರೋಬ್ಬರಿ 15 ಹೆಲಿಕಾಪ್ಟರ್ಗಳನ್ನು ಕಣಕ್ಕೆ ಇಳಿಸಿದೆ. ದುರಂತದ ತೀವ್ರತೆ ಹೆಚ್ಚಿರುವುದರಿಂದ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ರಕ್ಷಣೆಗಾಗಿ ಬಳಸಲಾಗುತ್ತಿದೆ. ಇಡೀ ರಕ್ಷಣಾ ಕಾರ್ಯಾಚರಣೆಯನ್ನು ನೇಪಾಳ ಸರ್ಕಾರವೇ ಖುದ್ದಾಗಿ ಮುಂಚೂಣಿಯಲ್ಲಿ ನಿಂತು ಸಂಯೋಜಿಸುತ್ತಿದೆ.




