ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲಿಸ್ಟೇನ್ ಧ್ವಜ ಹಾರಿಸಿ ಪೊಲೀಸರ ಅತಿಥಿಯಾಗಿರುವ ತಾಲೂಕಿನ ವಿಠ್ಠಲಘಾಟ್ ನಿವಾಸಿ ಮಹಮ್ಮದ್ ರಜಾ ಮಹಮ್ಮದ ಅಕ್ಬರ್ ಶೇಖ್ ಕುರಿತಂತೆ ಅಂಕೋಲಾ ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಮೆರವಣಿಗೆ ನಡೆದ ಪ್ರಮುಖ ಸ್ದಳಗಳಿಗೆ ಆರೋಪಿತನನ್ನು ಕರೆದುಕೊಂಡು ಹೋಗಿ ಮಹಜರು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.
ಆರೋಪಿತನ ಬಳಿ ಪ್ಯಾಲೆಸ್ಟೈನ್ ಧ್ವಜ ಎಲ್ಲಿಂದ ಬಂತು ಎನ್ನುವ ಕುರಿತಂತೆ ಸಹ ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಬಟ್ಟೆ ಖರೀದಿಸಿ ಧ್ವಜ ತಯಾರಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ಕುರಿತಂತೆ ಸಹ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ತಾಲೂಕಿನ ಬೊಬ್ರವಾಡ ಜಾಮಿಯಾ ಮಸೀದಿಯಿಂದ ಆರಂಭವಾದ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಹಲವಾರು ಬಗೆಯ ಧ್ವಜಗಳ ಪ್ರದರ್ಶನ ನಡೆದಿತ್ತಾದರೂ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಧ್ವಜಗಳು ಎಂದು ಯಾವುದೇ ರೀತಿಯ ಆಕ್ಷೇಪ ವ್ಯಕ್ತವಾಗಿರಲಿಲ್ಲ.
ಆದರೆ ಮೆರವಣಿಗೆಯಲ್ಲಿ ಯುವಕರ ಗುಂಪೊಂದು ಇಸ್ರೇಲ್ ವಿರುದ್ಧ ಆಕ್ರೋಶ ಭರಿತ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗಿದ್ದು, ಇವರ ಅಬ್ಬರದ ಘೋಷಣೆಗಳ ನಡುವೆ ಹಾರುತ್ತಿದ್ದ ಧ್ವಜ ಗಮನ ಸೆಳೆಯುವಂತಾಗಿದ್ದು ಇದು ಪ್ಯಾಲೆಸ್ಟೈನ್ ಧ್ವಜ ಎಂದು ಗುರುತಿಸಿದ ಕೆಲವರು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅಂಕೋಲಾ ಪೊಲೀಸ್ ನಿರೀಕ್ಷಕರು ಆಗಮಿಸಿದ ಧ್ವಜ ವಶಕ್ಕೆ ಪಡೆದುಯಾವುದೇ ರೀತಿಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗದಂತೆ ಸಮಯೋಜಿತ ನಿರ್ಧಾರ ಕೈಗೊಂಡಿದ್ದರು.
ಇದನ್ನೂ ಓದಿ:
ಮೆರವಣಿಗೆ ಮುಗಿದ ನಂತರ ಆರೋಪಿಯನ್ನು ವಶಕ್ಕೆ ಪಡೆದು, ಆತನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.



