ಹೊಸದಿಗಂತ ವರದಿ ತುಮಕೂರು :
ತುಮಕೂರು ತಾಲೂಕು ಹಿರೇಹಳ್ಳಿ ಕೆರೆಗೆ ಇಂದು ಹಠಾತ್ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ 18 ಎಕರೆ ಕೆರೆಯಲ್ಲಿ ಅರ್ಧದಷ್ಟು ಒತ್ತುವರಿಯಾಗಿದ್ದು ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸಿಇಓಗೆ ಆದೇಶ ನೀಡಿದ್ದಾರೆ.
ತುಮಕೂರು ಸಿದ್ದಗಂಗಾ ಮಠದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಹಿರೇಹಳ್ಳಿ ಪಂಚಾಯತಿಗೆ ದೀಢೀರ್ ಭೇಟಿ ನೀಡಿದ ಸಚಿವರಿಗೆ ಗ್ರಾಮಸ್ಥರು ಕೆರೆಯ ಬಗ್ಗೆ ತಿಳಿಸಿದಾಗ, ಕೆರೆ ಅಂಗಳಕ್ಕೆ ಖುದ್ದು ತೆರಳಿ ಪರಿಶೀಲಿಸಿದ ಸಚಿವರು, ಕಾನೂನು ರೀತ್ಯ ಒತ್ತುವರಿ ತೆರವಿಗೆ ಮತ್ತು ಕೆರೆ ಪುನಶ್ಚೇತನಕ್ಕೆ ಕ್ರಮ ವಹಿಸಲು ಸೂಚಿಸಿದರು.
ಕೆರೆಗೆ ಪಕ್ಕದಲ್ಲೇ ಇರುವ ಕೈಗಾರಿಕೆಯಿಂದ ರಾಸಾಯನಿಕ ತ್ಯಾಜ್ಯ ಹರಿಸುತ್ತಿದ್ದು, ಇದರಿಂದ ಕೆರೆಯ ನೀರು ಕಲುಷಿತವಾಗುತ್ತಿದೆ. ಜಾನುವಾರುಗಳು ಮೃತಪಡುತ್ತಿವೆ. ಜನರಿಗೆ ಚರ್ಮವ್ಯಾಧಿ ಬರುತ್ತಿದೆ ಎಂದು ಜನರು ದೂರಿದರು. ಈ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಈಶ್ವರ ಖಂಡ್ರೆ ಸೂಚಿಸಿದರು.
ಇದನ್ನೂ ಓದಿ:
ಪಂಚಾಯ್ತಿ ಕಚೇರಿಯಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿದ ಸಚಿವರು, ಪಂಚಾಯತಿ ಮುಂದಿನ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿಗಾಗಿ 25 ಲಕ್ಷ ರೂ. ಮಂಜೂರು ಮಾಡುವುದಾಗಿ ಸ್ಥಳದಲ್ಲೇ ಘೋಷಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.
ಇದೇ ವೇಳೆ ಹಿರೇಹಳ್ಳಿಯಲ್ಲಿ ನಿರ್ಮಾಣವಾಗಿರುವ ಯೋಗೀಶ್ ಲೇಔಟ್ ನವರು ಬೇರೆಯವರ ಜಮೀನಿಗೆ ತ್ಯಾಜ್ಯನೀರು ಹರಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಲೇಔಟ್ ಮಾಲೀಕರಿಗೆ ನೋಟೀಸ್ ನೀಡಿ ಸಮಸ್ಯೆ ಸರಿಪಡಿಸುವಂತೆ ಕ್ರಮವಹಿಸಿ ಎಂದರು.



