ಹೊಸದಿಗಂತ ವರದಿ ಉಳ್ಳಾಲ:
ಕಳೆದ ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಕೆಲಸಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರುವಿನ ಅವಿವಾಹಿತ ಯುವಕನೋರ್ವನು ಮಂಗಳವಾರ ಬೆಳಿಗ್ಗೆ ಸೌದಿ ಅರೇಬಿಯಾದಲ್ಲಿ ತಾನು ತಂಗಿದ್ದ ಕೋಣೆಯಲ್ಲಿ ದಿಢೀರನೆ ಸಾವನ್ನಪ್ಪಿದ್ದು, ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿಯ ನಿವಾಸಿ ಶರತ್ ಕುಮಾರ್ (35) ಮೃತ ಪಟ್ಟ ಯುವಕ.
ಕಳೆದ ಐದು ತಿಂಗಳ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ತೆರಳಿದ್ದ ಶರತ್, ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸುಪರ್ ವೈಸರ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಶರತ್ ಅವರು ತಮಿಳುನಾಡು ಮೂಲದ ಸಹೋದ್ಯೋಗಿ ಮಿತ್ರನ ಜೊತೆಯಲ್ಲಿ ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪನಿಯ ರೂಮ್ ನಲ್ಲಿ ಉಳಿದುಕೊಂಡಿದ್ದರು. ಸೋಮವಾರ ರಾತ್ರಿ 11 ಗಂಟೆಗೆ ಸಹೋದ್ಯೋಗಿಯು ರೂಮ್ ಒಳಗೆ ಬಂದಾಗ ಶರತ್ ಮಲಗಿಯೇ ಇದ್ದರು. ಮಂಗಳವಾರ ಬೆಳಿಗ್ಗೆ ಬೇಗನೆ ಕೆಲಸಕ್ಕೆ ತೆರಳಲು ಅಲಾರಮ್ ಇಟ್ಟಿದ್ದು, ಬೆಳಿಗ್ಗೆ ಅಲಾರಮ್ ಸದ್ದು ಬಾರಿಸಿದರೂ ಶರತ್ ಎದ್ದೇಳದೆ ಇದ್ದಾಗ, ರೂಮ್ ಸಹವರ್ತಿಯು ಪರಿಶೀಲಿಸಿದ್ದು ಈ ವೇಳೆ ಶರತ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:
ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಶರತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಶರತ್ ಅವರು ಮಂಗಳವಾರ ತಡ ರಾತ್ರಿವರೆಗೂ ಅಣ್ಣನ ಜೊತೆ ಪೋನಲ್ಲಿ ಸಂಭಾಷಣೆ ನಡೆಸಿದ್ದರು. ಶರತ್ ಅವರ ಅಕಾಲಿಕ ಸಾವಿನ ಸುದ್ದಿಯಿಂದ ಕುಟುಂಬ, ಬಂಧು, ಮಿತ್ರರು ಶೋಕತಪ್ತರಾಗಿದ್ದಾರೆ.
ಮೃತದೇಹವನ್ನ ತಾಯ್ನಾಡಿಗೆ ತರುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಅವಿವಾಹಿತರಾಗಿದ್ದ ಶರತ್ ಅವರು ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ.



