ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಹಬ್ಬ ಆಚರಣೆ ಎಲ್ಲೆಡೆ ತುಂಬಾ ಜೋರಾಗಿಯೇ ನಡೆಯುತ್ತಿದೆ. ಇದರ ಮಧ್ಯೆ ಟಿ. ನರಸೀಪುರದಲ್ಲಿ ಹಬ್ಬದ ಆಚರಣೆಗೆ ಪೊಲೀಸ್ ಅಧಿಕಾರಿಯೊಬ್ಬರು ಹಲವು ನಿರ್ಬಂಧಗಳನ್ನು ವಿಧಿಸಿರುವ ಆರೋಪ ಕೇಳಿಬಂದಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಯಾವುದೇ ರೀತಿಯ ತೊಂದರೆ ನೀಡಿದರೆ ನಾವು ಸಹಿಸುವುದಿಲ್ಲ. ರಾಜ್ಯದ ಯಾವುದೇ ಪ್ರದೇಶದಲ್ಲೂ ಗಣಪತಿ ಹಬ್ಬಕ್ಕೆ ತೊಂದರೆಯಾದರೆ ನಾನು ಆ ಸ್ಥಳಕ್ಕೆ ಬರ್ತೇನೆ ಎಂದು ಹೇಳಿದರು.
ಅಷ್ಟಕ್ಕೂ ಪೊಲೀಸ್ ಅಧಿಕಾರಿ ಹೇಳಿದ್ದೇನು?
ಟಿ. ನರಸೀಪುರದ ಇನ್ಸ್ಪೆಕ್ಟರ್ ಧನಂಜಯ್ ಅವರು ಗಣೇಶೋತ್ಸವದ ಸಂದರ್ಭದಲ್ಲಿ ಮಸೀದಿ ಮುಂದೆ ಮೆರವಣಿಗೆ ನಡೆಸಬಾರದು ಹಾಗೂ ಪಟಾಕಿ ಸಿಡಿಸಬಾರದು ಎಂದು ಹೇಳಿರುವುದೇ ವಿವಾದಕ್ಕೆ ಕಾರಣವಾಗಿದೆ.
ಈ ಸರ್ಕಾರದಿಂದಾಗಿ ಜನ ನೆಮ್ಮದಿಯಾಗಿ ಹಬ್ಬ ಆಚರಿಸೋದಕ್ಕೂ ಅವಕಾಶ ನೀಡುತ್ತಿಲ್ಲ. ರಾಜ್ಯದ ವಿವಿಧೆಡೆ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು. ಮೆರವಣಿಗೆ ನಡೆಸುವವರು ರೌಡಿಗಳಾ? ಎಂದು ಪೊಲೀಸ್ ಅಧಿಕಾರಿಯ ಹೇಳಿಕೆಯನ್ನು ಪ್ರಶ್ನಿಸಿದ ಆರ್. ಅಶೋಕ್, ಅಧಿಕಾರಿಗಳು ಭಕ್ತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದು ಯಾವ ರೀತಿಯ ಕಾಳಜಿ?
ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ, ಕುಂಕುಮ ಧರಿಸಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸೋ ಸಿಎಂ ತಮ್ಮನ್ನು ದೊಡ್ಡ ಹಿಂದೂ ಅನ್ನೋ ರೀತಿ ಬಿಂಬಿಸಿಕೊಳ್ಳುತ್ತಾರೆ. ಆದ್ರೆ ಭಕ್ತರಿಗೆ ಧಮಕಿ ಹಾಕುವಂತಹ ಪರಿಸ್ಥಿತಿ ನಿರ್ಮಾಣ ಆಗಿರೋದು ಯಾವ ರೀತಿಯ ಹಿಂದೂ ಕಾಳಜಿ ಎಂದು ಪ್ರಶ್ನಿಸಿದರು.



