ಮಡಿಕೇರಿ:
ಈದ್ ಮಿಲಾದ್ ಸಂದರ್ಭ ಹಸುವೊಂದನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಂಡಂಗೇರಿ ಗ್ರಾಮದ ಮೊಹಮ್ಮದ್ ಆಶಿಕ್(22) ಶಾಹಿದ್ (25) ಹಾಗೂ ಹ್ಯಾರೀಸ್ (34 ) ಬಂಧಿತ ಆರೋಪಿಗಳು.
ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ.ಭೀಮಯ್ಯ ಎಂಬವರಿಗೆ ಸೇರಿದ ಹಸುವೊಂದು ಸೆ.5ರಂದು ಕಳವಾಗಿತ್ತು.
ಈ ಕುರಿತು ದೊರೆತ ದೂರಿನ ಅನ್ವಯ ತನಿಖೆ ನಡೆಸಿದ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್.ಎಸ್, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪಿ, ವೀರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐಗಳಾದ ಲತಾ.ಎನ್.ಜೆ, ವಾಣಿಶ್ರೀ, ಸಿಬ್ಬಂದಿಗಳಾದ ಸಾಜನ್, ಜೋಸ್ ನಿಶಾಂತ್, ಸಂತೋಷ್ ಚೌಹಾನ್, ಅಬ್ದುಲ್ ಮಜೀದ್ ಮತ್ತು ಬೋಪಣ್ಣ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಮೂವರು ಆರೋಪಿಗಳನ್ನು ಬಂಧಿಸಿ, 2,600 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಆರೋಪಿ ಹ್ಯಾರೀಸ್ ಎಂಬಾತ 2024 ನೇ ಸಾಲಿನಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಮಾಡಿರುವ ಕುರಿತು ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.