ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ 2026-27 ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಬಜೆಟ್ ದೇಶದ ಜನರ ಆಶೋತ್ತರಗಳನ್ನು ಪೂರೈಸುವುದಲ್ಲದೆ, 2047ರ ವೇಳೆಗೆ ಭಾರತವನ್ನು ‘ಆತ್ಮನಿರ್ಭರ’ ಮತ್ತು ‘ವಿಕಸಿತ’ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಮಂತ್ರಿಯವರ ಸಂಕಲ್ಪಕ್ಕೆ ಬಲ ನೀಡುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಅವರು, “ಈ ಬಜೆಟ್ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಪೂರಕವಾದ ನಿಬಂಧನೆಗಳನ್ನು ಹೊಂದಿದೆ. ವಿಶೇಷವಾಗಿ ರಕ್ಷಣಾ ವಲಯಕ್ಕೆ ₹7.85 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿರುವುದು ಹೆಮ್ಮೆಯ ವಿಷಯ. ಇದಕ್ಕಾಗಿ ನಾನು ಪ್ರಧಾನಮಂತ್ರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ,” ಎಂದು ತಿಳಿಸಿದರು.



