ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನ ಸೂಪರ್-8 ಹಂತದಲ್ಲಿ ರೋಚಕ ತಿರುವು ಎದುರಾಗಿದೆ. ಗುಂಪು ಹಂತದಲ್ಲಿ ಅಜೇಯವಾಗಿ ಮುನ್ನುಗ್ಗಿದ್ದ ಭಾರತ ಮತ್ತು ಜಿಂಬಾಬ್ವೆ ತಂಡಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಸೂಪರ್-8ರ ತಮ್ಮ ಮೊದಲ ಪಂದ್ಯಗಳಲ್ಲೇ ಎರಡೂ ತಂಡಗಳು ಮುಗ್ಗರಿಸಿದ್ದು, ಫೆಬ್ರವರಿ 26ರ ಗುರುವಾರ ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಖಾಮುಖಿ ಇಬ್ಬರಿಗೂ ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ.
ಭಾರತಕ್ಕೆ ತವರಿನ ಲಾಭವೇನೋ ಇದೆ, ಆದರೆ ಜಿಂಬಾಬ್ವೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಈಗಾಗಲೇ ಗುಂಪು ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು ಮಣ್ಣುಮುಕ್ಕಿಸಿ ಬಂದಿರುವ ಜಿಂಬಾಬ್ವೆ, ಭಾರತದ ಮೇಲೂ ಒತ್ತಡ ಹೇರಲು ಸಜ್ಜಾಗಿದೆ. ಒಂದು ವೇಳೆ ಭಾರತ ಅಲ್ಪ ಮೈಮರೆತರೂ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಾಗಿದೆ.
ಈ ಪಂದ್ಯದ ಫಲಿತಾಂಶಕ್ಕಿಂತ ಮಳೆಯ ಭೀತಿ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ 1 ಅಂಕ ಸಿಗಲಿದೆ. ಆದರೆ, ರನ್ ರೇಟ್ ಕಡಿಮೆಯಿರುವುದರಿಂದ ಮತ್ತು ಮೊದಲ ಪಂದ್ಯದಲ್ಲಿ ಭಾರಿ ಅಂತರದ ಸೋಲು ಕಂಡಿರುವುದರಿಂದ, ಪಂದ್ಯ ರದ್ದಾದರೆ ಭಾರತದ ಸೆಮಿಫೈನಲ್ ಕನಸು ಬಹುತೇಕ ಭಗ್ನವಾಗಲಿದೆ.
ಆದರೆ, ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯಿದೆ. ಅಕ್ಯೂವೆದರ್ ವರದಿ ಪ್ರಕಾರ, ಗುರುವಾರ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆ ತೀರಾ ಕಡಿಮೆ ಇದೆ. ಹೀಗಾಗಿ ಪೂರ್ಣ 40 ಓವರ್ಗಳ ಪಂದ್ಯ ನಡೆಯುವುದು ಬಹುತೇಕ ಖಚಿತವಾಗಿದ್ದು, ಯಾರಿಗೆ ಗೆಲುವು ಒಲಿಯಲಿದೆ ಎಂಬ ಕುತೂಹಲ ಮನೆಮಾಡಿದೆ.



