ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ಮಾಂತ್ರಿಕ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರು ಇತ್ತೀಚಿನ ದಿನಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
ವಿಶೇಷವಾಗಿ ಬಾಲಿವುಡ್ ಅಥವಾ ಹಿಂದಿ ಚಿತ್ರರಂಗದಲ್ಲಿ ಕಳೆದ ಎಂಟು ವರ್ಷಗಳಿಂದ ತಮಗೆ ಕೆಲಸಗಳು ಕಡಿಮೆಯಾಗುತ್ತಿವೆ ಮತ್ತು ಇದರ ಹಿಂದೆ ‘ಕೋಮು ಭಾವನೆ’ಯ ಪ್ರಭಾವವಿರಬಹುದು ಎಂಬ ಅವರ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.
ಈ ವಿವಾದದ ಬೆನ್ನಲ್ಲೇ, ಹಿರಿಯ ನಟಿ ಫರೀದಾ ಜಲಾಲ್ ಅವರ ‘ಯಾದೇನ್ ಬಿ-ಟೌನ್ ಕೀ’ ಎಂಬ ಜನಪ್ರಿಯ ಪಾಡ್ಕಾಸ್ಟ್ನಲ್ಲಿ ಮಾತನಾಡುತ್ತಾ ರೆಹಮಾನ್ ಒಂದು ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ
‘ಇಸ್ಲಾಂ ಧರ್ಮದಲ್ಲಿಯೂ ಸಹ, ತನ್ನ ದೇಶದ ಮೇಲೆ ದೇಶಭಕ್ತಿ ಹೊಂದಿರುವುದು ಧರ್ಮದ ಅರ್ಧದಷ್ಟು ಭಾಗ ಎಂದು ಹೇಳಲಾಗಿದೆ. ಇದೇ ವಿಚಾರವು ನಮಗೆ ಒಂದು ದೊಡ್ಡ ದೇಶಭಕ್ತಿ ಗೀತೆಯನ್ನು ಸೃಷ್ಟಿಸಲು ಸ್ಫೂರ್ತಿ ನೀಡಿತು ಎಂದು ಅವರು ಹೇಳಿದ್ದಾರೆ.
1997ರಲ್ಲಿ ಭಾರತದ ಸ್ವಾತಂತ್ರ್ಯದ 50ನೇ ವರ್ಷದ ಸವಿನೆನಪಿಗಾಗಿ ‘ವಂದೇ ಮಾತರಂ’ ಎಂಬ ಆಲ್ಬಂ ಬಿಡುಗಡೆಯಾಗಿತ್ತು. ಈ ಆಲ್ಬಂನ ಅತ್ಯಂತ ಜನಪ್ರಿಯ ಹಾಡು ‘ಮಾ ತುಜೆ ಸಲಾಮ್’. ಗೀತ ಸಾಹಿತಿ ಮೆಹಬೂಬ್ ಕೊತ್ವಾಲ್ ಅವರು ಈ ಅದ್ಭುತ ಸಾಲುಗಳನ್ನು ಬರೆದಾಗ, ಅದು ದೇಶಪ್ರೇಮದ ಒಂದು ಸುಂದರ ಅಭಿವ್ಯಕ್ತಿಯಾಗಿ ಮಾರ್ಪಟ್ಟಿತು ಎಂದು ರೆಹಮಾನ್ ನೆನಪಿಸಿಕೊಂಡಿದ್ದಾರೆ.
ಈ ಯೋಜನೆಯ ಹಿಂದೆ ನಿರ್ದೇಶಕ ಮತ್ತು ನಿರ್ಮಾಪಕ ಭರತ್ ಬಾಲಾ ಅವರ ಶ್ರಮವಿತ್ತು. ಅವರ ತಂದೆ, ತನ್ನ ದೇಶಕ್ಕಾಗಿ ಏನಾದರೂ ಒಂದನ್ನು ಮಾಡುವಂತೆ ಮಗನಿಗೆ ತಿಳಿಸಿದ್ದರು. ಆ ಆಸೆಯ ಫಲವೇ ಈ ಆಲ್ಬಂ.
‘ನಾವು ‘ವಂದೇ ಮಾತರಂ’ ಮಾಡಲು ನಿರ್ಧರಿಸಿದಾಗ, ಅದು ಪ್ರತಿಯೊಂದು ಧರ್ಮದ ಯುವಜನತೆಯನ್ನು, ಪ್ರಪಂಚದಾದ್ಯಂತ ಇರುವ ಭಾರತೀಯರನ್ನು ತಲುಪಬೇಕು ಎಂದು ಬಯಸಿದ್ದೆವು. ಈ ಗೀತೆಯು ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲರನ್ನೂ ಭಾವನಾತ್ಮಕವಾಗಿ ದೇಶದೊಂದಿಗೆ ಬೆಸೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ.



