January17, 2026
Saturday, January 17, 2026
spot_img

‘ಕೈ’ ನಾಯಕರ ನಡುವೆ ಶುರುವಾಯ್ತು ಸೈಲೆಂಟ್ ವಾರ್! ರಾಜಣ್ಣನ ಚಾಟಿ ಏಟಿಗೆ ಡಿಕೆಶಿ ಮಾರ್ಮಿಕ ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಶೀತಲ ಸಮರ ಈಗ ದೆಹಲಿಯ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಕೆ.ಎನ್. ರಾಜಣ್ಣ, ಹೈಕಮಾಂಡ್ ನಾಯಕ ರಾಹುಲ್ ಗಾಂಧಿಯವರಿಗೆ ಬರೆದಿರುವ ಸರಣಿ ಪತ್ರಗಳು ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿವೆ.

“ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸರಿಯಾಗಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನೂ 12-13 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಬಹುದಿತ್ತು” ಎಂದು ರಾಜಣ್ಣ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದು ನೇರವಾಗಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಪ್ರಶ್ನಿಸಿದಂತಾಗಿತ್ತು.

ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ರಾಜಣ್ಣ ಅವರ ಟೀಕೆಗೆ ವ್ಯಂಗ್ಯಭರಿತವಾಗಿಯೇ ತಿರುಗೇಟು ನೀಡಿದರು. “ನನಗೆ ಇನ್ನೂ ಸ್ವಲ್ಪ ಅನುಭವ ಕಡಿಮೆ ಇದೆ. ರಾಜಣ್ಣ ಅವರಂತಹ ಹಿರಿಯರ ಮಾತಿನಂತೆ ನಾನು ಇನ್ನಷ್ಟು ತರಬೇತಿ ಪಡೆದುಕೊಂಡು ಬರುತ್ತೇನೆ” ಎಂದು ಮಾರ್ಮಿಕವಾಗಿ ಉತ್ತರಿಸುವ ಮೂಲಕ ಅಸಮಾಧಾನ ಹೊರಹಾಕಿದರು.

ರಾಜಣ್ಣ ಅವರನ್ನು ಈ ಹಿಂದೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಂಬ ವಿಚಾರ ಪ್ರಸ್ತಾಪವಾದಾಗ, “ಅದು ಬಹಳ ಸಂತೋಷದ ವಿಷಯ. ಆದರೆ ಕೃಷ್ಣ ಅವರು ಈಗ ನಮ್ಮೊಂದಿಗಿಲ್ಲ, ಹೀಗಾಗಿ ಅವರ ಬಗ್ಗೆ ನಾನು ದೇವರಲ್ಲಿಯೇ ಕೇಳಿಕೊಂಡು ಬರಬೇಕಷ್ಟೇ” ಎನ್ನುವ ಮೂಲಕ ರಾಜಣ್ಣ ಅವರ ಹಳೆಯ ನೆನಪುಗಳಿಗೆ ತಣ್ಣೀರೆರಚಿದರು.

ಒಟ್ಟಾರೆಯಾಗಿ, ಕೆ.ಎನ್. ರಾಜಣ್ಣ ಅವರ ಪತ್ರ ಸರಣಿಯು ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಡಿ.ಕೆ. ಶಿವಕುಮಾರ್ ಅವರ ಈ ‘ನಮ್ರತೆಯ ತಂತ್ರ’ ಪಕ್ಷದ ಹೈಕಮಾಂಡ್ ಗಮನ ಸೆಳೆಯುವಂತಿದೆ.

Must Read

error: Content is protected !!