Tuesday, November 11, 2025

ಪರಪ್ಪನ ಅಗ್ರಹಾರದ ‘ರಾಜಾತಿಥ್ಯ’ ಕಥೆಗೆ ಟ್ವಿಸ್ಟ್: ‘ಪಾರ್ಟಿ ವಿಡಿಯೋ’ದ ನಿಜಬಣ್ಣ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ‘ಎಣ್ಣೆ ಪಾರ್ಟಿ’ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಘಟನೆ ಇದೀಗ ಸ್ಪೋಟಕ ತಿರುವು ಪಡೆದಿದೆ. ಪ್ರಾಥಮಿಕ ತನಿಖೆಯಲ್ಲಿ, ವೈರಲ್ ಆಗಿದ್ದ ಮದ್ಯದ ಬಾಟಲಿಗಳಿಗೆ ಮೂತ್ರ ತುಂಬಿಸಿ ವಿಡಿಯೋ ಚಿತ್ರೀಕರಣ ಮಾಡಿರುವುದು ಬಯಲಾಗಿದೆ.

ಮೂತ್ರ ತುಂಬಿದ ಮೂರು ಬಾಟಲಿಗಳನ್ನು ಸಾಲಾಗಿ ಜೋಡಿಸಿ, ಗ್ಲಾಸ್‌ಗೆ ಸುರಿದು ಮದ್ಯದಂತೆ ಬಿಂಬಿಸಿ ಈ ವಿಡಿಯೋವನ್ನು ಬೇಕೆಂದೇ ಹರಿಬಿಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಷಡ್ಯಂತ್ರದ ಸಂಶಯ: ಏಕೆ ಈ ‘ನಕಲಿ’ ವಿಡಿಯೋ?

ಜೈಲಿನೊಳಗೆ ಉಗ್ರರು, ಅತ್ಯಾಚಾರಿಗಳು ಸೇರಿದಂತೆ ಕೈದಿಗಳು ಮೊಬೈಲ್ ಮತ್ತು ಟಿವಿ ಬಳಸಿ ರಾಜಾತಿಥ್ಯ ಪಡೆಯುತ್ತಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿತ್ತು. ಆದರೆ, ‘ಮೂತ್ರ ಪಾರ್ಟಿ’ಯ ಈ ಹೊಸ ಮಾಹಿತಿ, ಜೈಲಿನ ಆಡಳಿತ ವರ್ಗದೊಳಗೆ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯತ್ತ ಬೊಟ್ಟು ಮಾಡಿದೆ.

ಭ್ರಷ್ಟಾಚಾರದ ಜಾಲ: ಪರಪ್ಪನ ಅಗ್ರಹಾರದಲ್ಲಿ ಉನ್ನತ ಹುದ್ದೆಗಳಿಗೆ ಭಾರಿ ಬೇಡಿಕೆ ಇದ್ದು, ವಿಐಪಿ ಖೈದಿಗಳಿಗೆ ಸೌಲಭ್ಯ ಒದಗಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದಟ್ಟ ಅನುಮಾನವಿದೆ.

ಟಾರ್ಗೆಟ್ ಆಪರೇಷನ್?: ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿ, ಹಣಕಾಸಿನ ಲಾಭ ಅಥವಾ ಹುದ್ದೆಗಳ ಕಾರಣಕ್ಕಾಗಿ ಸಿಬ್ಬಂದಿಯೇ ಇಂತಹ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಟ್ಟಿರಬಹುದು ಎಂಬ ಪ್ರಶ್ನೆ ಮೂಡಿದೆ.

ಅಧಿಕಾರಿಗಳ ಮೇಲೆ ಕ್ರಮ: ಉನ್ನತ ಮಟ್ಟದ ತನಿಖೆಗೆ ಆದೇಶ

ಈ ಅಕ್ರಮಗಳ ಹಿನ್ನೆಲೆಯಲ್ಲಿ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಗೃಹ ಸಚಿವರು ಈ ಕುರಿತು ಸಮಗ್ರ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ಮತ್ತು ರಿಷ್ಯಂತ್ ಈ ಸಮಿತಿಯಲ್ಲಿದ್ದು, ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಸಮಿತಿಯ ವರದಿಯ ನಂತರ ಜೈಲಿನೊಳಗಿನ ಷಡ್ಯಂತ್ರದ ಸಂಪೂರ್ಣ ಸತ್ಯಾಂಶ ಬಯಲಾಗುವ ನಿರೀಕ್ಷೆಯಿದೆ.

error: Content is protected !!