Monday, December 22, 2025

ಮಾದಪ್ಪನ ಸನ್ನಿಧಿಯಲ್ಲಿ ಭಕ್ತಿಯ ಸಿರಿ: ಎಳ್ಳು ಅಮಾವಾಸ್ಯೆಗೆ ಬೆಟ್ಟವನ್ನೇ ಆವರಿಸಿದ ಭಕ್ತ ಸಮೂಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ವರ್ಷದ ‘ಎಳ್ಳು ಅಮಾವಾಸ್ಯೆ’ಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಗುರುವಾರ ಮತ್ತು ಶುಕ್ರವಾರದಂದು ನಡೆದ ಈ ಧಾರ್ಮಿಕ ಉತ್ಸವದಲ್ಲಿ ಭಕ್ತರ ಮಹಾಪೂರವೇ ಹರಿದುಬಂದಿದ್ದು, ಮಾದಪ್ಪನ ಸನ್ನಿಧಿಯು ಭಕ್ತಸಾಗರದಿಂದ ಕಂಗೊಳಿಸಿತು.

ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ, ನೆರೆರಾಜ್ಯಗಳಾದ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಮಹಾಮಂಗಳಾರತಿ ಹಾಗೂ ವಿವಿಧ ಹರಕೆ ಸೇವೆಗಳಲ್ಲಿ ಪಾಲ್ಗೊಂಡು ಭಕ್ತರು ಪುನೀತರಾದರು.

ಈ ಬಾರಿಯ ವಿಶೇಷವೆಂದರೆ ಲಾಡು ಪ್ರಸಾದಕ್ಕೆ ಉಂಟಾದ ಭಾರೀ ಬೇಡಿಕೆ. ಎರಡು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಲಾಡುಗಳು ಮಾರಾಟವಾಗಿವೆ. ಲಾಡು ಮಾರಾಟದಿಂದಲೇ ಸುಮಾರು 25 ರಿಂದ 40 ಲಕ್ಷ ರೂಪಾಯಿ ಆದಾಯ ಹರಿದುಬಂದಿದೆ. ದಿನನಿತ್ಯ ಸರಾಸರಿ 50,000 ಲಾಡುಗಳನ್ನು ತಯಾರಿಸಲಾಗುತ್ತದೆ. ಆದರೆ ವಿಶೇಷ ದಿನದ ನಿಮಿತ್ತ ಉತ್ಪಾದನೆಯನ್ನು 75,000ಕ್ಕೆ ಹೆಚ್ಚಿಸಲಾಗಿತ್ತು.

ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಹಾಗೂ ಸ್ವಯಂಸೇವಕರು ಶಿಸ್ತಿನ ಕ್ಯೂ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ದಾಸೋಹ ಭವನದಲ್ಲಿ ಸತತವಾಗಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಗೆ ದೇವಸ್ಥಾನದ ಪ್ರಾಧಿಕಾರವು ಹೆಚ್ಚಿನ ಆದ್ಯತೆ ನೀಡಿದ್ದು, ಭಕ್ತರಿಂದ ಪ್ರಶಂಸೆ ವ್ಯಕ್ತವಾಯಿತು.

ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮಯೋಚಿತ ಸಿದ್ಧತೆಯಿಂದಾಗಿ ಎಳ್ಳು ಅಮಾವಾಸ್ಯೆಯ ಉತ್ಸವವು ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ಸಂಪನ್ನಗೊಂಡಿತು.

error: Content is protected !!