ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ಗೆ ವಿಚಾರಣೆಗೆ ಕರೆತಂದಿದ್ದ ವೇಳೆ ಆರೋಪಿ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗೌತಮ್ (35) ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಪ್ರಕರಣದ ವಿಚಾರಣೆಗೆಂದು ಪೊಲೀಸರು ಕರೆತಂದಿದ್ದರು. ಈ ವೇಳೆ ಮಹಡಿಯಿಂದ ಹಾರಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಿಲ್ಲ.
ಕಳೆದ ಏಪ್ರಿಲ್ನಲ್ಲಿ ಆರೋಪಿ ಗೌತಮ್ ವಿರುದ್ಧ ಬೆಂಗಳೂರಿನ ಆಡುಗೋಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಡಿಎನ್ಎ ಪರೀಕ್ಷೆ ವೇಳೆ ಮ್ಯಾಚ್ ಆಗಿದ್ದ ಹಿನ್ನಲೆ ಆರೋಪಿ ಬಂಧಿಸಿದ್ದ ಪೊಲೀಸರು, ಆತನ ವಿರುದ್ಧ ಚಾರ್ಜ್ಶೀಟ್ ದಾಖಲಿಸಿದ್ದರು. ಪ್ರಕರಣ ಸಂಬಂಧ ಇಂದಿನಿಂದ ಟ್ರಯಲ್ ನಡೆಯಲಿದ್ದ ಹಿನ್ನಲೆ ಗೌತಮ್ನನ್ನು ಕೋರ್ಟ್ ಗೆ ಕರೆತರಲಾಗಿತ್ತು. ಕುಟುಂಬದವರು ಆರೋಪಿಯ ಭೇಟಿಗೆ ಬಂದಿದ್ದ ಕಾರಣ, ಗೌತಮ್ ಕೈಗೆ ಹಾಕಿದ್ದ ಬೇಡಿಯನ್ನ ಪೊಲೀಸರು ಕಳಚಿದ್ದರು. ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ಏಕಾಏಕಿಯಾಗಿ ನ್ಯಾಯಾಲಯದ 5ನೇ ಮಹಡಿಯಿಂದ ಗೌತಮ್ ಜಿಗಿದಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆತ ಅಂತಿಮವಾಗಿ ಉಸಿರು ಚೆಲ್ಲಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.