February 17, 2026
Tuesday, February 17, 2026
spot_img

ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ ವಕೀಲನ ವಿರುದ್ಧ ‘ನ್ಯಾಯಾಂಗ ನಿಂದನೆ’ಗೆ AG ಅಸ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ (71) ಅವರ ವಿರುದ್ಧ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ನ್ಯಾಯಾಂಗ ನಿಂದನೆ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ.

ನ್ಯಾಯಾಲಯದ ಘನತೆ ಮತ್ತು ಸಾಂಸ್ಥಿಕ ಸಮಗ್ರತೆಗೆ ಧಕ್ಕೆ ತರುವ ಈ ಗಂಭೀರ ಘಟನೆಯ ಬಗ್ಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷ, ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠಕ್ಕೆ ಮನವಿ ಮಾಡಿದರು.

ವಕೀಲ ರಾಕೇಶ್ ಕಿಶೋರ್ ಅವರ ಈ ಕೃತ್ಯವು ಸಾಂಸ್ಥಿಕ ಸಮಗ್ರತೆ ಮತ್ತು ನ್ಯಾಯಾಲಯದ ಘನತೆಯನ್ನು ದುರ್ಬಲಗೊಳಿಸುವ ಯತ್ನ ಎಂದು ವಿಕಾಸ್ ಸಿಂಗ್ ಅಭಿಪ್ರಾಯಪಟ್ಟರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆ ವ್ಯಾಪಕ ಕೋಲಾಹಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ವಿಚಾರಣೆಗೆ ತುರ್ತು ಮನವಿ ಮಾಡಲಾಯಿತು. ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ದೀಪಾವಳಿ ರಜೆಯ ನಂತರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದೆ.

ಘಟನೆ ಹಿನ್ನೆಲೆ

ಅಕ್ಟೋಬರ್ 6 ರಂದು ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ, ಹಿರಿಯ ವಕೀಲ ರಾಕೇಶ್ ಕಿಶೋರ್ ಏಕಾಏಕಿ ನ್ಯಾಯಪೀಠದ ಕಡೆಗೆ ಶೂ ಎಸೆಯಲು ಪ್ರಯತ್ನಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ವಕೀಲರನ್ನು ವಶಕ್ಕೆ ಪಡೆದು ಹೊರಗೆ ಕರೆದೊಯ್ದರು. ಈ ಗದ್ದಲದ ನಡುವೆಯೂ ಸಿಜೆಐ ಗವಾಯಿ ಅವರು ಸ್ವಲ್ಪವೂ ವಿಚಲಿತರಾಗದೆ, ಶಾಂತವಾಗಿ ವಿಚಾರಣೆಯನ್ನು ಮುಂದುವರೆಸಿದರು. ನಂತರ ಸಿಜೆಐ ಗವಾಯಿ ಅವರು ಈ ಘಟನೆಯನ್ನು “ಮರೆತುಹೋದ ಅಧ್ಯಾಯ” ಎಂದು ಕರೆದು ತಮ್ಮ ಉದಾರತೆಯನ್ನು ಪ್ರದರ್ಶಿಸಿದರು.

ಘಟನೆ ನಡೆದ ಕೂಡಲೇ, ಭಾರತೀಯ ವಕೀಲರ ಪರಿಷತ್ತು (BCI) ತಕ್ಷಣದಿಂದ ಜಾರಿಗೆ ಬರುವಂತೆ ವಕೀಲ ರಾಕೇಶ್ ಕಿಶೋರ್ ಅವರ ವಕಾಲತ್ತು ಪರವಾನಗಿಯನ್ನು ಅಮಾನತುಗೊಳಿಸಿತ್ತು. ವಕೀಲನ ಈ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಹ ತೀವ್ರವಾಗಿ ಖಂಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !