Wednesday, November 12, 2025

ಅನಾಥ ಶಿಶುಗಳ ರಕ್ಷಣೆಗೆ ಪ್ರಯತ್ನ: ಬೆಂಗಳೂರಿನಲ್ಲಿದೆ ʼಮಮತೆಯ ತೊಟ್ಟಿಲುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೋಕ್ಸೊ ಪ್ರಕರಣಗಳಲ್ಲಿ, ಲೈಂಗಿಕ ದೌರ್ಜನ್ಯ ಅಥವಾ ಅಸುರಕ್ಷಿತ ಲೈಂಗಿಕತೆಯ ನಂತರ ಗರ್ಭಿಣಿಯರಾಗಿ ಮಗುವಿಗೆ ಜನ್ಮ ನೀಡುವ ಹುಡುಗಿಯರು ಶಿಶುವನ್ನು ಕಸದ ಬುಟ್ಟಿಗಳು ಅಥವಾ ಚರಂಡಿಯಲ್ಲಿ ಬಿಟ್ಟುಹೋಗುವುದನ್ನು ತಡೆಯಲು ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆರಂಭಿಸಿದ್ದ ‘ಮಮತೆಯ ತೊಟ್ಟಿಲು’ ಯೋಜನೆ ಒಂದು ವರ್ಷ ಪೂರೈಸಿದೆ.

ಇಡೀ ವರ್ಷದಲ್ಲಿ ಒಂದೇ ಮಗುವನ್ನು ‘ಮಮತೆಯ ತೊಟ್ಟಿಲು’ ಮೂಲಕ ಸ್ವೀಕರಿಸಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಶಿಶುಗಳಿಗೆ ಆಗುವ ಹಾನಿ, ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಮಾಡಲು ಇನ್ನಷ್ಟು ಉಪಕ್ರಮಗಳನ್ನು ಹಮ್ಮಿಕೊಳ್ಳಲು ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.

‘ಮಮತೆಯ ತೊಟ್ಟಿಲು’ ಉಪಕ್ರಮವು ಸರ್ಕಾರದ ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರಂಭಿಸಿರುವ ಯೋಜನೆಯಾಗಿದೆ. ಶಿಶುಗಳನ್ನು ಅಸುರಕ್ಷಿತವಾಗಿ ಪರಿತ್ಯಜಿಸುವುದನ್ನು ತಡೆಗಟ್ಟಲು ಮತ್ತು ಆ ಶಿಶುಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕಾಳಜಿವಹಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಶಿಶುವನ್ನು ತ್ಯಜಿಸಿದಾಗ ಮಗುವಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಯೋಜನೆಯ ಪ್ರಮುಖ ಉದ್ದೇಶ. ಇದು ಪರಿತ್ಯಕ್ತ ಪ್ರತಿಯೊಂದು ಮಗುವೂ ಕಾನೂನುಬದ್ಧವಾಗಿ ದತ್ತು ವ್ಯವಸ್ಥೆಯಡಿ ಬರುವುದನ್ನು ಖಾತರಿಪಡಿಸುತ್ತದೆ. ಬೆಂಗಳೂರಿನ ಪೂರ್ವ ವಲಯದ ಏಳು ಸ್ಥಳಗಳಲ್ಲಿ ಸಿಸಿಟಿವಿ ಮೇಲ್ವಿಚಾರಣೆ ಇಲ್ಲದೆ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ಸಿವಿ ರಾಮನ್ ಜನರಲ್ ಆಸ್ಪತ್ರೆ, ವರ್ತೂರು ಮತ್ತು ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಂಟ್ ಮೈಕೆಲ್ಸ್ ಹೋಮ್ ಕಾನ್ವೆಂಟ್, ಶಿಶು ಮಂದಿರ ಮತ್ತು ತಾಲ್ಲೂಕು ಆಸ್ಪತ್ರೆ ಮತ್ತು ಕೆಆರ್ ಪುರಂನ ಡಿಸಿಪಿಒಗಳ ಬಳಿ ಮಮತೆಯ ತೊಟ್ಟಿಲುಗಳಿವೆ. 

error: Content is protected !!