ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ‘ಜನನಾಯಗನ್’ ಚಿತ್ರಕ್ಕೆ ಎದುರಾಗಿದ್ದ ಸೆನ್ಸಾರ್ ಸಂಕಷ್ಟ ಈಗ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ‘ಕೆಡಿ’ ಚಿತ್ರಕ್ಕೂ ಬಿಸಿ ತಟ್ಟಿದೆ. ಮುಂಬೈನ ಕೇಂದ್ರ ಸೆನ್ಸಾರ್ ಮಂಡಳಿಯು ಈ ಚಿತ್ರದ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿಯಮದ ಪ್ರಕಾರ, ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಈಗಾಗಲೇ ಚಿತ್ರವನ್ನು ವೀಕ್ಷಿಸಿ, ಅದರಲ್ಲಿನ ರಕ್ತಪಾತದ ದೃಶ್ಯಗಳಿಗಾಗಿ ‘ಎ’ ಸರ್ಟಿಫಿಕೇಟ್ ನೀಡಲು ಮುಂದಾಗಿತ್ತು. ಕೇವಲ ಎರಡು ಸಾಲಿನ ಸಾಹಿತ್ಯ ಬದಲಾವಣೆಗೆ ಸೂಚಿಸಿತ್ತು. ಆದರೆ, ಪ್ರಾದೇಶಿಕ ಮಂಡಳಿಯ ನಿರ್ಧಾರವನ್ನು ಪರಿಗಣಿಸದ ಕೇಂದ್ರ ಮಂಡಳಿಯು, ನಿರ್ದೇಶಕ ಅಥವಾ ನಿರ್ಮಾಣ ಸಂಸ್ಥೆಗೆ ಯಾವುದೇ ಮಾಹಿತಿ ನೀಡದೆ ಚಿತ್ರವನ್ನು ‘ರಿವೈಸಿಂಗ್ ಕಮಿಟಿ’ಗೆ ವರ್ಗಾಯಿಸಿದೆ.
ಈ ಬೆಳವಣಿಗೆಯಿಂದ ಬೇಸತ್ತಿರುವ ನಿರ್ದೇಶಕ ಪ್ರೇಮ್, “ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಈ ರೀತಿ ರಾಜಕಾರಣ ಮಾಡಲಾಗುತ್ತಿದೆಯೇ?” ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.



