ಮಹಾಶಿವರಾತ್ರಿಯ ಜಾಗರಣೆ ಕೇವಲ ರಾತ್ರಿ ಪೂರ್ತಿ ಎಚ್ಚರವಾಗಿರುವುದಲ್ಲ, ಅದು ಭಕ್ತಿ ಮತ್ತು ಶಿಸ್ತಿನ ಸಮಾಗಮ. ಈ ಪವಿತ್ರ ದಿನದಂದು ಜಾಗರಣೆ ಮಾಡುವವರು ಪಾಲಿಸಬೇಕಾದ ಮುಖ್ಯ ನಿಯಮಗಳು ಮತ್ತು ಆಚರಣೆಗಳ ಮಾಹಿತಿ ಇಲ್ಲಿದೆ.
ಹಬ್ಬದ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಶಿವನ ಧ್ಯಾನ ಮಾಡುತ್ತಾ ಅಂದು ಪೂರ್ಣ ಉಪವಾಸ ಮತ್ತು ಜಾಗರಣೆ ಮಾಡುವುದಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು.
ಜಾಗರಣೆಯ ಸಮಯದಲ್ಲಿ ಅನ್ನಾಹಾರ ಸೇವನೆ ನಿಷಿದ್ಧ. ಕೇವಲ ಹಾಲು, ಹಣ್ಣು ಅಥವಾ ಹಣ್ಣಿನ ರಸವನ್ನು ಸೇವಿಸಬಹುದು. ಆರೋಗ್ಯ ಸಮಸ್ಯೆ ಇರುವವರು ಸಾತ್ವಿಕ ಆಹಾರವನ್ನು ಮಿತವಾಗಿ ಸೇವಿಸಬಹುದು.
ಶಿವರಾತ್ರಿಯ ರಾತ್ರಿಯನ್ನು ನಾಲ್ಕು ‘ಜಾವ’ಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಜಾವದಲ್ಲೂ ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ ಮತ್ತು ಧೂಪ-ದೀಪಗಳಿಂದ ಪೂಜೆ ಸಲ್ಲಿಸಬೇಕು.
ಜಾಗರಣೆಯ ಉದ್ದಕ್ಕೂ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಪಠಿಸುವುದು ಶ್ರೇಷ್ಠ. ಶಿವ ಪುರಾಣ ಓದುವುದು ಅಥವಾ ಶಿವನ ಭಜನೆಗಳಲ್ಲಿ ತೊಡಗುವುದು ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಹಕಾರಿ.
ಜಾಗರಣೆಯ ಸಮಯದಲ್ಲಿ ಕೋಪ, ಅಸೂಯೆ ಅಥವಾ ನಕಾರಾತ್ಮಕ ಮಾತುಗಳನ್ನಾಡಬಾರದು. ಕೇವಲ ಮನೋರಂಜನೆಗಾಗಿ ಚಲನಚಿತ್ರ ನೋಡುವುದು ಅಥವಾ ಮೊಬೈಲ್ ಬಳಸುವುದು ಜಾಗರಣೆಯ ಉದ್ದೇಶವನ್ನು ಹಾಳುಮಾಡುತ್ತದೆ.
ಮರುದಿನ ಮುಂಜಾನೆ ಸ್ನಾನ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸಿದ ನಂತರವಷ್ಟೇ ಉಪವಾಸವನ್ನು ಬಿಡಬೇಕು.



