ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಬಾಲಿವುಡ್ನ ಖ್ಯಾತ ನಾಯಕ ನಟ, ಕಪೂರ್ ಮನೆತನದ ಕುಡಿ ಹಾಗೂ ಬೋನಿ ಕಪೂರ್ರ ಪುತ್ರ ಅರ್ಜುನ್ ಕಪೂರ್ ಸರ್ಪಸಂಸ್ಕಾರ ಸೇವೆ ನೀಡಿದರು.
ಶ್ರೀ ದೇವಳಕ್ಕೆ ತೆರಳಿದ ಅವರು ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದ ಅವರು ಬಳಿಕ ಹೊಸಳಿಗಮ್ಮನ ದರುಶನ ಮಾಡಿದರು.ನಂತರ ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ದರುಶನ ಮಾಡಿ ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.
ಬಳಿಕ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಗೆ ತೆರಳಿದ ಅವರು ಆರಂಭದಲ್ಲಿ ಸರ್ಪಸಂಸ್ಕಾರ ಸೇವೆಗೆ ಸಂಕಲ್ಪ ಮಾಡಿದರು. ನಂತರ ವಿದಿವಿಧಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ನಾಳೆ ನಾಗಪ್ರತಿಷ್ಠೆ:
ಸೋಮವಾರ ಮುಂಜಾನೆ ಸರ್ಪಸಂಸ್ಕಾರ ಯಾಗ ಶಾಲೆಯಲ್ಲಿ ಎರಡನೇ ದಿನದ ವೈದಿಕ ವಿದಿವಿಧಾನಗಳಲ್ಲಿ ಅವರು ಭಾಗವಹಿಸಲಿದ್ದಾರೆ.ಆರಂಭದಲ್ಲಿ ಬ್ರಹ್ಮಚಾರಿ ಆರಾಧನೆ ಮತ್ತು ಗೋಪೂಜೆ ನೆರವೇರಿಸಲಿದ್ದಾರೆ. ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನದ ಮಹಾಪೂಜೆಯ ಬಳಿಕ ನಾಗಪ್ರತಿಷ್ಠಾ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಲಿದ್ದಾರೆ.



