ಹೊಸದಿಗಂತ ವರದಿ ಅಂಕೋಲಾ:
ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ
ಯತ್ನಿಸಿದ ಘಟನೆ ಪಟ್ಟಣದ ರಸ್ತೆ ಕಣಕಣೇಶ್ವರ ದೇವಾಲಯದ ಪಕ್ಕದಲ್ಲಿ ನಡೆದಿದೆ.
ಹೇರ್ ಕಟಿಂಗ್ ಸೆಲೂನ್ ಒಂದರಿಂದ ಗೋಪಾಲಕೃಷ್ಣ ನಾಯಕ ಹೊರಗೆ ಬರುವುದನ್ನೇ ಕಾದು ಕುಳಿತಿದ್ದ ದುಷ್ಕರ್ಮಿಗಳ ತಂಡ ಅವರನ್ನು ನೆಲಕ್ಕೆ ಬೀಳಿಸಿ ತಲೆ ಮತ್ತು ಕೈ ಭುಜಕ್ಕೆ ಹಲ್ಲೆ ನಡೆಸಿದೆ.
ದಾಳಿ ವೇಳೆ ಗೋಪಾಲಕೃಷ್ಣ ಅವರು ಎದ್ದು ಓಡಿ ಹಣಕಾಸಿನ ಸಂಸ್ಥೆಯೊಂದಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡ ಕಾರಣ ಇನ್ನಷ್ಟು ಹಲ್ಲೆ ನಡೆಯುವುದು ತಪ್ಪಿದೆ.
ಗೋವಾ ನೋಂದಣಿ ಹೊಂದಿರುವ ಕಾರಿನಲ್ಲಿ 6 ಜನ ದುಷ್ಕರ್ಮಿಗಳು ಇದ್ದರು ಎಂದು ತಿಳಿದು ಬಂದಿದೆ. ಗೋಪಾಲಕೃಷ್ಣ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಆಸ್ಪತ್ರೆಗೆ ಧಾವಿಸಿದ್ದಾರೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳನ್ನು ಗೋವಾ ಗಡಿಯಲ್ಲಿ ವಶಕ್ಕೆ ಪಡೆದಿರುವ ಮಾಹಿತಿ ಇದೆ. ಅದರೆ ಇದನ್ನು ಪೊಲೀಸರು ಇನ್ನಷ್ಟೇ ದೃಢಪಡಿಸಬೇಕಿದೆ.



