ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಆಡಳಿತವು ‘ಉಳಿತಾಯದ ಬಜೆಟ್’ ಮಂಡಿಸುವ ಮೂಲಕ ಆರ್ಥಿಕ ಶಿಸ್ತಿಗೆ ಹೆಸರಾಗಿತ್ತು. ಪೂರ್ಣ ಐದು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿದ್ದ ಅವರು, ಅಂದು ರಾಜ್ಯದ ಬೊಕ್ಕಸವನ್ನು ಸಮತೋಲನದಲ್ಲಿಟ್ಟಿದ್ದರು.
ಆದರೆ, ಎರಡನೇ ಅವಧಿಯಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ ಬೃಹತ್ ಪ್ರಮಾಣದ ಅನುದಾನವನ್ನು ಹೊಂದಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಯೋಜನೆಗಳ ಆರ್ಥಿಕ ಹೊರೆಯಿಂದಾಗಿ ರಾಜ್ಯದ ಸಾಲದ ಮೊತ್ತ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿರುವುದರಿಂದ, ಈ ಬಾರಿ ‘ಉಳಿತಾಯ’ದ ಬದಲು ‘ಆದಾಯ ಕೊರತೆ’ ಮತ್ತು ‘ಹೆಚ್ಚುತ್ತಿರುವ ಸಾಲ’ದ ಸುಳಿಗೆ ಸಿಲುಕುವಂತಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.



