ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಹಾಸನಾಂಬೆ ದೇವಿಯ ಆರಾಧನೆ ಕರ್ನಾಟಕದ ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದೆ. ವರ್ಷಕ್ಕೆ ಕೇವಲ ಕೆಲವು ದಿನಗಳಷ್ಟೇ ತೆರೆದಿರೋ ಈ ದೇವಸ್ಥಾನದಲ್ಲಿ ದರುಶನ ಪಡೆಯಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಖ್ಯಾತ ಕನ್ನಡ ಸಾಹಿತ್ಯಕಾರ್ತಿ ಬಾನು ಮುಷ್ತಾಕ್ ಅವರು ಹಾಸನಾಂಬೆ ದೇವಿಯ ದರುಶನ ಪಡೆದು ಆಶೀರ್ವಾದ ಪಡೆದಿದ್ದಾರೆ.
ಹಾಸನದ ಮೂಲದ ಬಾನು ಮುಷ್ತಾಕ್, ಬಾಲ್ಯದಿಂದಲೇ ಸಾಮಾಜಿಕ ಹೋರಾಟ ಮತ್ತು ಸಾಹಿತ್ಯದಲ್ಲಿ ತೊಡಗಿಸಿಕೊಂಡವರು. ಪತ್ರಕರ್ತೆಯಾಗಿ, ವಕೀಲೆಯಾಗಿಯೂ, ಹೋರಾಟಗಾರ್ತಿಯಾಗಿ ಅವರು ರಾಜ್ಯದ ಸಾಮಾಜಿಕ ಚಳವಳಿಗಳಿಗೆ ತಮ್ಮದೇ ಗುರುತು ಬರೆದಿದ್ದಾರೆ. ಇತ್ತೀಚೆಗಷ್ಟೇ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನಡೆಸಿದ್ದ ಬಾನು ಮುಷ್ತಾಕ್, ಇದೀಗ ಹಾಸನಾಂಬೆಯ ದರುಶನ ಪಡೆದು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.
ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಎಂಬ ಕಥಾ ಸಂಕಲನಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದ್ದು, ಕನ್ನಡ ಸಾಹಿತ್ಯದ ಪರವಾಗಿ ಇದು ಇತಿಹಾಸ ನಿರ್ಮಿಸಿದ ಕ್ಷಣವಾಗಿತ್ತು. ದೀಪಾ ಭಾಸ್ತಿ ಅವರ ಅನುವಾದದಲ್ಲಿ ಇಂಗ್ಲಿಷ್ನಲ್ಲಿ ಬಿಡುಗಡೆಯಾದ ಈ ಕೃತಿ ಮಹಿಳಾ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಅಂಶಗಳನ್ನು ಒತ್ತಿ ಹೇಳುತ್ತದೆ.