March 23, 2026
Monday, March 23, 2026
spot_img

ಆರ್​ಸಿಬಿಗೆ ಡೆಡ್‌ಲೈನ್ ಕೊಟ್ಟ ಬಿಸಿಸಿಐ: ಬೆಂಗಳೂರು ಬಿಟ್ಟು ಬೇರೆಡೆ ಪಯಣ ಬೆಳೆಸುತ್ತಾ RCB?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಸೀಸನ್-19ರ ಆರಂಭಕ್ಕೆ ದಿನಗಣನೆ ಶುರುವಾಗಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ‘ತವರು ಮೈದಾನ’ ಯಾವುದೆಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿರುವ ನಿರ್ಬಂಧವೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಐಪಿಎಲ್ 2025ರ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ದುರ್ಘಟನೆಯ ನಂತರ ಮೈದಾನದ ಸುರಕ್ಷತೆಯ ದೃಷ್ಟಿಯಿಂದ ಅದರ ಮೇಲೆ ನಿಷೇಧ ಹೇರಲಾಗಿತ್ತು. ಪ್ರಸ್ತುತ ಕರ್ನಾಟಕ ಸರ್ಕಾರವು ಕೆಲವು ಕಠಿಣ ಷರತ್ತುಗಳೊಂದಿಗೆ ಪಂದ್ಯಗಳನ್ನು ಆಯೋಜಿಸಲು ಹಸಿರು ನಿಶಾನೆ ತೋರಿಸಿದೆಯಾದರೂ, ಆರ್​ಸಿಬಿ ಫ್ರಾಂಚೈಸಿ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಐಪಿಎಲ್ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಪ್ರತಿಯೊಂದು ಫ್ರಾಂಚೈಸಿಯು ತನ್ನ ತವರು ಮೈದಾನದ ಕ್ರಿಕೆಟ್ ಮಂಡಳಿಯಿಂದ ‘ನಿರಾಕ್ಷೇಪಣಾ ಪತ್ರ’ ಸಲ್ಲಿಸುವುದು ಕಡ್ಡಾಯ. ಆದರೆ ಆರ್​ಸಿಬಿ ಈವರೆಗೆ ಚಿನ್ನಸ್ವಾಮಿ ಮೈದಾನವನ್ನೇ ತನ್ನ ಹೋಮ್ ಗ್ರೌಂಡ್ ಎಂದು ದೃಢಪಡಿಸದ ಕಾರಣ, ಬಿಸಿಸಿಐ ಜನವರಿ 27 ರವರೆಗೆ ಅಂತಿಮ ಗಡುವು ನೀಡಿದೆ.

ಒಂದು ವೇಳೆ ಬೆಂಗಳೂರಿನಲ್ಲಿ ಆಡಲು ಸಾಧ್ಯವಾಗದಿದ್ದರೆ, ಆರ್​ಸಿಬಿ ಮ್ಯಾನೇಜ್‌ಮೆಂಟ್ ಈ ಕೆಳಗಿನ ಎರಡು ಮೈದಾನಗಳನ್ನು ಪರಿಗಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ:

ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂ

ಈ ಮಂಗಳವಾರದೊಳಗೆ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಬೇಕಾಗಿದ್ದು, ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಬೆಂಗಳೂರಿನಲ್ಲೇ ಆಡಲಿದೆಯೇ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳಲಿದೆಯೇ ಎಂಬ ಆತಂಕದಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !