January19, 2026
Monday, January 19, 2026
spot_img

ಬೆಳಗಾವಿ ಗಡಿ ವಿವಾದ: ಸುಪ್ರೀಂನಲ್ಲಿ ಕಾನೂನು ಹೋರಾಟಕ್ಕೆ ಕರ್ನಾಟಕ ಸಜ್ಜು

ಹೊಸದಿಗಂತ ಬೆಳಗಾವಿ:

ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ದಶಕಗಳ ಗಡಿ ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರದ ಅರ್ಜಿಯನ್ನು ಎದುರಿಸಲು ರಾಜ್ಯದ ಕಾನೂನು ತಂಡ ಸಂಪೂರ್ಣ ಸಜ್ಜಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, “ರಾಜ್ಯದ ಗಡಿಯ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಮಹಾರಾಷ್ಟ್ರಕ್ಕೆ ಅಧಿಕಾರ ವ್ಯಾಪ್ತಿ ಇದೆಯೇ ಎಂಬುದು ನಮ್ಮ ಮೂಲ ಪ್ರಶ್ನೆ. ಮೊದಲು ಈ ತಾಂತ್ರಿಕ ಅಂಶ ಇತ್ಯರ್ಥವಾಗಬೇಕು,” ಎಂದು ಗುಡುಗಿದರು. ಕರ್ನಾಟಕದ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ‘ಒಳಮೀಸಲಾತಿ ವಿಧೇಯಕ’ದ ಬಗ್ಗೆಯೂ ಸಿಎಂ ಪ್ರತಿಕ್ರಿಯಿಸಿದರು. ರಾಜ್ಯಪಾಲರು ಈ ವಿಧೇಯಕವನ್ನು ಮರಳಿಸಿರುವುದನ್ನು ಒಪ್ಪಿಕೊಂಡ ಅವರು, “ರಾಜ್ಯಪಾಲರು ಕೆಲವು ಸ್ಪಷ್ಟನೆಗಳನ್ನು ಕೇಳಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರವು ಶೀಘ್ರದಲ್ಲೇ ಸೂಕ್ತ ವಿವರಣೆ ಮತ್ತು ತಾರ್ಕಿಕ ಉತ್ತರಗಳನ್ನು ನೀಡಲಿದೆ,” ಎಂದು ಭರವಸೆ ನೀಡಿದರು.

Must Read