ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಕೇಂದ್ರ ಬಜೆಟ್ ಕುರಿತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಆಯವ್ಯಯದಲ್ಲಿ ಪಶ್ಚಿಮ ಬಂಗಾಳದ ಜನರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿ, ಇದು ಯಾವುದೇ ಸಮುದಾಯಕ್ಕೂ ಸ್ಪಷ್ಟ ಪರಿಹಾರ ನೀಡದ ಬಜೆಟ್ ಎಂದು ಟೀಕಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ಬಂಗಾಳದ ಹೆಸರೇ ಉಲ್ಲೇಖವಾಗಿಲ್ಲ ಎಂದು ಬ್ಯಾನರ್ಜಿ ಕಿಡಿಕಾರಿದರು. ಸುಮಾರು 85 ನಿಮಿಷಗಳ ಭಾಷಣದಲ್ಲಿ ರಾಜ್ಯದ ಕುರಿತು ಒಂದು ಮಾತು ಕೂಡ ಇಲ್ಲದಿರುವುದು ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು. ರೈತರು, ಯುವಕರು, ಉದ್ಯೋಗ ಸೃಷ್ಟಿ ಅಥವಾ ಆದಾಯ ಹೆಚ್ಚಳ ಕುರಿತು ಯಾವುದೇ ಸ್ಪಷ್ಟ ಯೋಜನೆಗಳು ಇಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಬಂಗಾಳದ ಜನರನ್ನು “ಬಾಂಗ್ಲಾದೇಶಿಗಳಂತೆ ನೋಡುತ್ತಿದೆ” ಎಂಬ ಗಂಭೀರ ಆರೋಪ ಮಾಡಿದ ಅವರು, 2020ರಿಂದಲೇ ರಾಜ್ಯದ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದರು. ಈ ಬಜೆಟ್ ಜನಪರ ಆಯವ್ಯಯವಲ್ಲ, ಸರ್ಕಾರವೇ ತನ್ನನ್ನು ತಾನು ಹೊಗಳಿಕೊಂಡ ಸ್ವಯಂ-ಮೌಲ್ಯಮಾಪನ ವರದಿ ಮಾತ್ರ ಎಂದು ಅಭಿಷೇಕ್ ಬ್ಯಾನರ್ಜಿ ವ್ಯಂಗ್ಯವಾಡಿದರು.



