March 15, 2026
Sunday, March 15, 2026
spot_img

ಕರ್ನಾಟಕದಲ್ಲಿ ‘ಕಪ್ಪ ಕಾಣಿಕೆ’ ವಿವಾದ; ಚುನಾವಣೆ ಅಂದ್ರೆ ‘ನೋಟು’ ಅಂದಿದ್ಯಾಕೆ ರಾಜಕೀಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಕೀಯದಲ್ಲಿ ಇದೀಗ ‘ಕಪ್ಪ ಕಾಣಿಕೆ’ಯ ಗೂಡಿಗೆ ಕೈ ಹಾಕಲಾಗಿದ್ದು, ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಚುನಾವಣೆಗಳ ಸಂದರ್ಭದಲ್ಲಿ ಹಣಕಾಸಿನ ವಹಿವಾಟುಗಳ ಬಗ್ಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಹಳೆಯ ವಿಡಿಯೋಗಳು ಮತ್ತು ‘ಲಂಚದ ಡೈರಿ’ಯ ವಿಚಾರ ಮುನ್ನೆಲೆಗೆ ಬಂದಿದೆ.

ಸಿದ್ದು ಡಿನ್ನರ್ ಸುತ್ತ ಗಂಭೀರ ಆರೋಪ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಏರ್ಪಡಿಸಿದ್ದ ಔತಣಕೂಟದ ‘ಇನ್ನರ್ ಮೀಟಿಂಗ್’ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳದಿದ್ದರೂ, ಗಂಭೀರ ರಾಜಕೀಯ ಚರ್ಚೆಗಳು ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಈ ಡಿನ್ನರ್ ಮೀಟಿಂಗ್‌ನ ಅಂತರಾಳದಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ‘ಕಾಣಿಕೆ’ ಹೋಗುತ್ತಿದೆ ಎಂಬ ಆರೋಪವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ರಾಜ್ಯದ ಹಣವನ್ನು ಬೇರೆ ರಾಜ್ಯದ ಚುನಾವಣೆಗೆ ಬಳಸಲಾಗುತ್ತಿದೆ ಎಂಬುದು ಕಮಲ ನಾಯಕರ ಮುಖ್ಯ ಆಕ್ಷೇಪ.

ಪ್ರಿಯಾಂಕ್ ಖರ್ಗೆಯಿಂದ ಹಳೆಯ ‘ವಿಡಿಯೋ ಬಾಂಬ್’:

ಈ ಆರೋಪಕ್ಕೆ ಪ್ರತಿಯಾಗಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರಿಗೆ ತೀಕ್ಷ್ಣ ಕೌಂಟರ್ ನೀಡಿದ್ದಾರೆ. 2017ರ ಫೆಬ್ರವರಿ 13ರ ಹಳೆಯ ವಿಡಿಯೋ ಒಂದನ್ನು ಅವರು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆಗಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಮತ್ತು ದಿವಂಗತ ಅನಂತ್‌ಕುಮಾರ್ ಅವರು ಗುಸುಗುಸು ಮಾತನಾಡಿದ್ದು, “ನೀವು ಕೊಟ್ಟಿರ್ತೀರಿ, ನಾವು ಕೊಟ್ಟಿರ್ತೀರಿ ಅದನ್ನ ಯಾರಾದ್ರೂ ಬರೆದುಕೊಳ್ತಾರಾ” ಎಂಬರ್ಥದ ಮಾತುಗಳು ಕೇಳಿಬಂದಿದ್ದವು. ಈ ವಿಡಿಯೋ ಪೋಸ್ಟ್ ಮಾಡಿ, “ಬಿಜೆಪಿಯವರೇ, ನಿಮ್ಮ ಹೈಕಮಾಂಡ್‌ಗೆ ನೀವು ಕಪ್ಪ ನೀಡಿದ್ದನ್ನ ಮರೆತುಬಿಟ್ರಾ?” ಎಂದು ಪ್ರಿಯಾಂಕ್ ಖರ್ಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಐಶ್ವರ್ಯ ಅನಂತ್‌ಕುಮಾರ್‌ರಿಂದ ‘ಡೈರಿ ವಾರ್’ ಪ್ರತ್ಯುತ್ತರ:

ಪ್ರಿಯಾಂಕ್ ಖರ್ಗೆಯವರ ಈ ನಡೆ ದಿವಂಗತ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಪುತ್ರಿ ಐಶ್ವರ್ಯ ಅವರಿಗೆ ತೀವ್ರ ಆಕ್ರೋಶ ತಂದಿದೆ. ಅವರು ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ್ದಾರೆ. “ಆರ್‌ಎಸ್‌ಎಸ್ ತೆಗಳುವ ನಿಮ್ಮ ವಿಫಲ ಯತ್ನದ ನಂತರ, ಈಗ ನೀವು ಅನಂತ್‌ಕುಮಾರ್ ಅವರ ಹಿಂದೆ ಬಿದ್ದಿದ್ದೀರಿ. ಒಂದು ವೇಳೆ ನೀವು ಮರೆತಿದ್ದರೆ ನಾನು ನೆನಪಿಸುತ್ತೇನೆ; ನಿಮ್ಮ ಪಕ್ಷದ ಮುಖ್ಯಮಂತ್ರಿಯ ಕುಖ್ಯಾತ ಡೈರಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಲಾದ ಭಾರೀ ಲಂಚದ ಮೊತ್ತದ ಕುರಿತ ಅಕ್ಷರಗಳು ನಿಮ್ಮ ಪಕ್ಷದ ನಾಯಕರನ್ನೇ ಕಾಡಬಹುದು. ಸತ್ಯ ಯಾವಾಗಲೂ ಬಹಿರಂಗವಾಗುತ್ತದೆ” ಎಂದು ಲಂಚದ ಡೈರಿ ವಿಚಾರವನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ.

ನೈತಿಕ ಚೌಕಟ್ಟು ಮೀರಿದ ರಾಜಕೀಯ:

ಒಟ್ಟಿನಲ್ಲಿ, ರಾಜಕೀಯದಲ್ಲಿ ‘ನೋಟು ಇಲ್ಲದಿದ್ದರೆ ಓಟು ಇಲ್ಲ’ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಗಂಭೀರ ಚರ್ಚೆಯ ನಡುವೆಯೇ, ‘ಕಪ್ಪ ಕಾಣಿಕೆ’ಯ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ನಡೆಯುತ್ತಿರುವ ಈ ಕೆಸರೆರಚಾಟ ಇಂದಿನ ಚುನಾವಣಾ ಮತ್ತು ರಾಜಕೀಯ ಪರಿಸ್ಥಿತಿಯ ದುರಂತ ಕೈಗನ್ನಡಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !