ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಹುಟ್ಟಿದ ತಮ್ಮನನ್ನು ಅಣ್ಣನೇ ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಯ ಪೊದೆಗೆ ಎಸೆದಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ್ (24) ಕೊಲೆಯಾದವ. ಹತ್ಯೆ ಮಾಡಿದ ಅಣ್ಣ ಶಿವರಾಜ್(28) ಮತ್ತು ಆತನ ಸ್ನೇಹಿತರಾದ ಸಂದೀಪ್(24), ಪ್ರಶಾಂತ್(26) ಎಂಬುವರನ್ನು ಬನ್ನೇರುಘಟ್ಟ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ಕಳ್ಳತನಕ್ಕೂ ಇಳಿದಿದ್ದ ತಮ್ಮನ ಕಾಟ ತಾಳಲಾರದೆ ಒಡ ಹುಟ್ಟಿದವನನ್ನು ಅಣ್ಣನೇ ಮರ್ಡರ್ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಕೊಲೆಯಾದ ಧನರಾಜ್ ಕಲಬುರಗಿಯಲ್ಲಿಯೇ ತಂದೆ-ತಾಯಿಯ ಜೊತೆ ವಾಸವಿದ್ದ. ಕೆಲಸಕ್ಕೆ ಹೋಗದೆ ಕಳ್ಳತನ ಮಾಡೋದರ ಜೊತೆಗೆ, ಕುಡಿದು ಬಂದು ಹೆತ್ತವರ ಮೇಲೆ ನಿತ್ಯ ಹಲ್ಲೆ ಮಾಡ್ತಿದ್ದ.
ಪ್ರಶ್ನೆ ಮಾಡಿದ ಸಹೋದರ ಶಿವರಾಜನ ಮೇಲೂ ಹಲವು ಬಾರಿ ಹಲ್ಲೆ ನಡೆಸಿದ್ದು, ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದ. ಮೊಬೈಲ್, ಕುರಿ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಈತ ಕಳ್ಳತನ ಮಾಡುತ್ತಿದ್ದ. ಈತನ ಕೆಲಸದಿಂದಾಗಿ ಅದೆಷ್ಟೋ ಬಾರಿ ಮನೆ ಬಳಿ ಬಂದು ಜನರು ಗಲಾಟೆ ಮಾಡಿದ್ದರು. ಹೀಗಾಗಿ ಸಹೋದರ ಧನರಾಜ್ನ ಕಾಟ ತಾಳಲಾರದೆ ಆತನ ಕೊಲೆಗೆ ಸ್ನೇಹಿತರ ಜೊತೆ ಸೇರಿ ಶಿವರಾಜ್ ಪ್ಲ್ಯಾನ್ ಮಾಡಿದ್ದ.

