ಹೊಸದಿಗಂತ ಬೆಳಗಾವಿ:
ರಾಜ್ಯದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಹೊಸ ತರಬೇತಿ ಕೇಂದ್ರಗಳು ಮತ್ತು ಸರಣಿ ಮ್ಯಾರಥಾನ್ಗಳ ಮೂಲಕ ಕ್ರೀಡಾ ಹಬ್ಬಕ್ಕೆ ಸರ್ಕಾರ ಮುನ್ನುಡಿ ಬರೆದಿದೆ.
ಕುಸ್ತಿ ಕ್ರೀಡೆಯ ತವರೂರಾದ ಬೆಳಗಾವಿಯ ಗ್ರಾಮೀಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಬೆಳಗುಂದಿ ಗ್ರಾಮದಲ್ಲಿ ಹೊಸದಾಗಿ ಕುಸ್ತಿ ಅಖಾಡ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸ್ಥಳೀಯ ಕುಸ್ತಿ ಪಟುಗಳಿಗೆ ಸುಸಜ್ಜಿತ ತರಬೇತಿ ಪಡೆಯಲು ಅನುಕೂಲವಾಗಲಿದೆ.
ರಾಜ್ಯದ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಾದ ಬೆಳಗಾವಿ, ಗೋಕರ್ಣ, ಚಿತ್ರದುರ್ಗ ಮತ್ತು ಹಂಪಿಗಳಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ ಸ್ಪರ್ಧೆಗಳನ್ನು ಆಯೋಜಿಸಲು ಸರ್ಕಾರ ಮುಂದಾಗಿದೆ. ಪ್ರತಿ ಮ್ಯಾರಥಾನ್ಗೆ ತಲಾ ₹10 ಲಕ್ಷ ಅನುದಾನ ಮೀಸಲಿರಿಸಲಾಗಿದ್ದು, ಕ್ರೀಡೆಯೊಂದಿಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಇದಲ್ಲದೆ, ರಾಜ್ಯದ 10 ಜಿಲ್ಲಾ ಕೇಂದ್ರಗಳಲ್ಲಿ ಹೆಸರಾಂತ ಕ್ರೀಡಾಪಟುಗಳ ಹೆಸರಿನಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್ಗಳನ್ನು ತಲಾ ₹4 ಲಕ್ಷ ವೆಚ್ಚದಲ್ಲಿ ಆಯೋಜಿಸಲಾಗುತ್ತದೆ.
ಮೈಸೂರಿನ ಕ್ರೀಡಾ ಪ್ರೇಮಿಗಳಿಗಾಗಿ ದಟ್ಟಗಳ್ಳಿಯಲ್ಲಿ ಅತ್ಯಾಧುನಿಕ ಸೈಕ್ಲಿಂಗ್ ವೆಲೋಡೋಮ್ ನಿರ್ಮಿಸಲು ಬಜೆಟ್ನಲ್ಲಿ ಚಾಲನೆ ನೀಡಲಾಗಿದೆ. ಒಟ್ಟಾರೆಯಾಗಿ, ಗ್ರಾಮೀಣ ಸೊಗಡಿನ ಕುಸ್ತಿಯಿಂದ ಹಿಡಿದು ಆಧುನಿಕ ಸೈಕ್ಲಿಂಗ್ವರೆಗೆ ಎಲ್ಲ ಕ್ರೀಡೆಗಳಿಗೂ ಒತ್ತು ನೀಡುವ ಮೂಲಕ ರಾಜ್ಯ ಸರ್ಕಾರ ಹೊಸ ಕ್ರೀಡಾ ಕ್ರಾಂತಿಗೆ ಸಜ್ಜಾಗಿದೆ.



