Tuesday, September 9, 2025

ಮತ್ತಷ್ಟು ಕುತೂಹಲ ಕೆರಳಿಸಿದ ‘ಶವ ಹೂತಿಟ್ಟ ಪ್ರಕರಣ’: ಬೆಳ್ತಂಗಡಿಗೆ ಮೊಹಾಂತಿ ವಿಸಿಟ್

ಹೊಸ ದಿಗಂತ ವರದಿ, ಮಂಗಳೂರು:

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ಈಗ ಮತ್ತಷ್ಟು ಕೂತೂಹಲ‌ ಕೆರಳಿಸಿದ್ದು, ಇಂದು ಎಸ್‌ಐಟಿ (ವಿಶೇಷ ತನಿಖಾ ತಂಡ)ದ ನೇತೃತ್ವ ವಹಿಸಿರುವ ಪ್ರಣವ್ ಮೊಹಾಂತಿ ಬೆಳ್ತಂಗಡಿಯ ನೂತನ ಎಸ್.ಐ.ಟಿ ಕಚೇರಿಗೆ ಭೇಟಿ ನೀಡಿದ್ದಾರೆ.

ಈ ನಡುವೆ ಎಸ್ ಐಟಿ ತನ್ನ ವಿಚಾರಣೆಯನ್ನು ಎರಡನೇ ದಿನವೂ ಮುಂದುವರಿಸಿದ್ದು, ಭಾನುವಾರವೂ ದೂರುದಾರ ‘ಅನಾಮಿಕ’ನ ವಿಚಾರಣೆ ನಡೆಸಿದೆ.

ಭಾನುವಾರ ಬೆಳಗ್ಗೆ ದೂರುದಾರ ತನ್ನ ವಕೀಲರೊಂದಿಗೆ ಮಂಗಳೂರಿನ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನ ವೇಳೆಗೆ ಪ್ರಣಬ್ ಮೊಹಾಂತಿ ಎಸ್.ಐ.ಟಿ ಕಚೇರಿಗೆ ಆಗಮಿಸಿ, ದೂರುದಾರನ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರವೂ ಆತ ಕಪ್ಪು ಬಣ್ಣದ ಮುಸುಕಿನಲ್ಲಿಯೇ ಆಗಮಿಸಿದ್ದ. ಎಸ್‌ಐಟಿ ಕಚೇರಿಯಲ್ಲಿರುವ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಮುಂದೆ ಆತನನ್ನು ಹಾಜರುಪಡಿಸಲಾಯಿತು.

ಪ್ರಕರಣದ ತನಿಖೆಗೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಭಾನುವಾರ ಮಂಗಳೂರಿಗೆ ಆಗಮಿಸಿದ್ದಾರೆ.

ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಅವರು ಮಧ್ಯಾಹ್ನ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅಲ್ಲಿ ಎಸ್‌ಐಟಿ ತನಿಖಾಧಿಕಾರಿಗಳಾದ ಅನುಚೇತ್ ಹಾಗೂ ಜಿತೇಂದ್ರ ಕುಮಾರ್ ದಯಾಮ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅವರು ಆಗಮಿಸಿದರು.

ಇದನ್ನೂ ಓದಿ